ನವದೆಹಲಿ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ನಾಲ್ವರು ರೈತರು ಮತ್ತು ಓರ್ವ ಪತ್ರಕರ್ತನ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಆಶಿಶ್ ಮಿಶ್ರಾ ಮತ್ತು ಆಶಿಶ್ ಪಾಂಡೆ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾ. ಚಿಂತಾ ರಾಮ್ ತಿರಸ್ಕರಿಸಿದ್ದಾರೆ ಎಂದು ಹಿರಿಯ ಅಧಿಕಾರಿ ಎಸ್ಪಿ ಯಾದವ್ 'ಪಿಟಿಐ'ಗೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರನ್ನು ಎಸ್ಐಟಿ ಬಂಧಿಸಿದೆ. 38 ವರ್ಷದ ಅಂಕಿತ್ ದಾಸ್ ಮತ್ತು 37 ವರ್ಷದ ಲತೀಫ್ ಯಾನೆ ಕಾಲ ಬಂಧನಕ್ಕೆ ಒಳಪಟ್ಟ ಮತ್ತಿಬ್ಬರು ಆರೋಪಿಗಳು.
ಅಕ್ಟೋಬರ್ 9ರಂದು ಆಶಿಶ್ ಮಿಶ್ರಾ ಅವರನ್ನು ಬಂಧಿಸಲಾಗಿತ್ತು. ವಿಶೇಷ ತನಿಖಾ ದಳ ಆಶಿಶ್ ಮಿಶ್ರಾ ಅವರನ್ನು 12 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಬಳಿಕ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರು.
ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಆಶಿಶ್ ಮಿಶ್ರಾ, ಲವಕುಶ, ಆಶಿಶ್ ಪಾಂಡೆ, ಭಾರ್ತಿ, ಅಂಕಿತ್ ದಾಸ್ ಮತ್ತು ಕಾಲ ಬಂಧಿತರು.