ನವದೆಹಲಿ: ಪಂಚರಾಜ್ಯ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ. ಈ ಸಂದರ್ಭದಲ್ಲಿ ಕೋವಿಡ್ ನಿಯಮಾವಳಿಗಳು ಕೂಡ ಇರುವುದರಿಂದ ಅದಕ್ಕೆ ಅನುಸಾರವಾಗಿ ಚುನಾವಣಾ ಪ್ರಚಾರ ನಡೆಸಲು ಬಿಜೆಪಿ ಮುಂದಾಗಿದೆ.
ಬಿಜೆಪಿ ಈ ಬಾರಿ ಹೈಬ್ರಿಡ್ ಪ್ರಚಾರ ತಂತ್ರದ ಮೊರೆ ಹೋಗಲಿದೆ. ಸಣ್ಣ ಮಟ್ಟಿನ ಪ್ರಚಾರ ಸಭೆಗಳನ್ನು ನಡೆಸುವುದು ಮತ್ತು ಲೈವ್ ಕಾರ್ಯಕ್ರಮದ ಮೂಲಕ ವಿವಿಧ ಸಾಮಾಜಿಕ ತಾಣಗಳಲ್ಲಿ ವಿಡಿಯೊ ಪ್ರಸಾರ ಮಾಡಲಿದೆ.
ಜನವರಿ 22ರಿಂದ ಕೇಂದ್ರ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್ ಹಾಗೂ ಪಕ್ಷದ ಉನ್ನತ ನಾಯಕರು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.
ತಂತ್ರಜ್ಞಾನ ಬಳಸಿಕೊಂಡು ಈ ಬಾರಿ ಹೆಚ್ಚಿನ ಜನರನ್ನು ತಲುಪುವಂತೆ ಪ್ರಚಾರ ಕೈಗೊಳ್ಳಲಾಗುವುದು ಎಂದು ಬಿಜೆಪಿ ಮೂಲಗಳು ಹೇಳಿವೆ.
ಕೋವಿಡ್ ಸೋಂಕು ಪ್ರಕರಣ ಹೆಚ್ಚಳವಾಗಿರುವುದರಿಂದ ದೊಡ್ಡ ಮಟ್ಟದ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆ ನಡೆಸುವುದಕ್ಕೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಅಲ್ಲದೆ, ಚುನಾವಣೆ ಘೋಷಣೆಯಾಗಿರುವ ರಾಜ್ಯಗಳಲ್ಲೂ ಕೋವಿಡ್ ನಿಯಮಗಳನ್ನು ಹೇರಲಾಗಿದೆ.