ಯಾದಗಿರಿ: ಕೋವಿಡ್-19 ರೂಪಾಂತರಿ ತಳಿ ಓಮೈಕ್ರಾನ್ ಸೋಂಕು ನಿಯಂತ್ರಿಸಿ ಮೂರನೇ ಅಲೆ ಬರದಂತೆ ತಡೆಯಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಕೋವಿಡ್ ನಿಯಮ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಕೋರಿದರು.
ಜಿಲ್ಲಾಡಳಿತ ಹಾಗೂ ಯಾದಗಿರಿ ನಗರಸಭೆ ವತಿಯಿಂದ ಕೋವಿಡ್ ವೈರಸ್ ಹರಡದಂತೆ ತಡೆಯಲು ಸಾರ್ವಜನಿಕರಿಗೆ ಅರಿವು ಮೂಡಿಸಲು ಹಮ್ಮಿಕೊಂಡ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹಣ್ಣು ಮತ್ತು ತರಕಾರಿಗಳ ಮಾರಾಟಗಾರರು ಮತ್ತು ಇತರ ಸಣ್ಣ ಪುಟ್ಟ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳ ಮುಂದೆ ಬರುವ ಗ್ರಾಹಕರಿಗೆ ಅಂತರ ಪಾಲಿಸಿ ವಹಿವಾಟು ಮಾಡುವಂತೆ ಸೂಚಿಸಬೇಕು ಎಂದರು.
ನಿರ್ಲಕ್ಷ್ಯ ವಹಿಸಿ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಗರದ ಸುಭಾಷ್ ವೃತ್ತ, ಹಳೆ ಬಸ್ ನಿಲ್ದಾಣದ ಪ್ರದೇಶಗಳಿಗೆ ತೆರಳಿದ ಜಿಲ್ಲಾಧಿಕಾರಿ ಮಾಸ್ಕ್ ಹಾಕದೇ ಇರುವವರಿಗೆ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಿದರು.
ಸೋಂಕಿನ ಲಕ್ಷಣಗಳು ಕಂಡುಬಂದರೆ ಸಹಾಯವಾಣಿ ಸಂಖ್ಯೆ 08473-253950 ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ವೇಳೆ ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಶಾ ಆಲಂ ಹುಸೇನ್, ನಗರಸಭೆ ಆಯುಕ್ತ ಬಕ್ಕಪ್ಪ, ನಗರಸಭೆ ಸಿಬ್ಬಂದಿ ಇದ್ದರು.
ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಕೋವಿಡ್ ನಿಯಮ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಕೋರಿದರು.