ಸಾಗರ: ನಗರದ ಜೋಗ ರಸ್ತೆಯಲ್ಲಿ ಕಳೆದ ಜೂನ್ ತಿಂಗಳಲ್ಲಿ ಆರಂಭಗೊಂಡು ಕೆಲವು ತಿಂಗಳ ನಂತರ ಬಾಗಿಲು ಮುಚ್ಚಿದ್ದ ಇಂದಿರಾ ಕ್ಯಾಂಟೀನ್ ಗುರುವಾರದಿಂದ ಮತ್ತೆ ಆರಂಭಗೊಂಡಿದೆ.
ನಗರಸಭೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂದಿರಾ ಕ್ಯಾಂಟೀನ್ಗೆ ಶಾಸಕ ಎಚ್. ಹಾಲಪ್ಪ ಹರತಾಳು ಚಾಲನೆ ನೀಡಿದರು.
‘ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕೆಲಸ. ಈ ಕಾರಣಕ್ಕಾಗಿ ಸರ್ಕಾರ ಕಳೆದ ಎರಡು ವರ್ಷ ಬಡವರಿಗೆ ಉಚಿತವಾಗಿ ಪಡಿತರ ಅಕ್ಕಿ ವಿತರಿಸಿದೆ. ಕಳೆದ ವರ್ಷ ಆರಂಭಗೊಂಡಿದ್ದ ಇಂದಿರಾ ಕ್ಯಾಂಟೀನ್ ಅನ್ನು ಅನಿವಾರ್ಯ ಕಾರಣಗಳಿಂದ ಮುಚ್ಚಲಾಗಿತ್ತು. ಸಾರ್ವಜನಿಕರ ಒತ್ತಾಯದ ಮೇರೆಗೆ ಮತ್ತೆ ತೆರೆಯಲಾಗಿದೆ. ಇದರ ಪ್ರಯೋಜನ ಅರ್ಹರಿಗೆ ತಲುಪಬೇಕಿದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ‘ಇಂದಿರಾ ಕ್ಯಾಂಟೀನ್ ನಿರ್ವಹಣೆಯನ್ನು ನಗರಸಭೆ ಮಾಡಲಿದೆ. ಕೋವಿಡ್ ಮೂರನೇ ಅಲೆ ಆರಂಭವಾಗಿರುವ ಕಾರಣ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಪ್ರಯೋಜನವಾಗಲಿ ಎಂದು ಪುನರಾರಂಭ ಮಾಡಲಾಗಿದೆ’ ಎಂದು ಹೇಳಿದರು.