ಚಿಂಚೋಳಿ (ಕಲಬುರಗಿ ಜಿಲ್ಲೆ): ಗುಳೆ ಹೋಗಲು ಪತಿ ನಿರಾಕರಿಸಿದ್ದಕ್ಕೆ ತಾಲ್ಲೂಕಿನ ರುದ್ನೂರ ಗ್ರಾಮದ ಪತ್ನಿ ಶಾಂತಮ್ಮ ಸಂತೋಷ ಧರಿಮ್ಯಾಲ್ (26) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಗ್ರಾಮದಲ್ಲಿ ಇರುವುದು ಬೇಡ, ಬೆಂಗಳೂರಿಗೆ ಹೋಗಿ ಅಲ್ಲಿಯೇ ದುಡಿದು ಬದುಕೋಣ ಎಂದು ಪತ್ನಿ ಶಾಂತಮ್ಮ ಹೇಳುತ್ತಿದ್ದಳು. ಕೋವಿಡ್ ಮುಗಿದ ಮೇಲೆ ಹೋಗೋಣ, ಈಗ ಬೇಡ ಎಂದು ಹೇಳಿದ್ದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಪತಿ ಸಂತೋಷ ಹೇಳಿಕೆ ನೀಡಿದ್ದಾರೆ.
ದಿಗ್ಗಾಂವ್ ಗ್ರಾಮದ ಶಾಂತಮ್ಮ ಅವರನ್ನು ರುದ್ನೂರಿನ ಸಂತೋಷ ಎಂಬುವವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುಲೇಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.