ಚಿಕ್ಕಮಗಳೂರು: ರಾಜ್ಯ ಸರ್ಕಾರವು ‘ಭಾಗ್ಯಲಕ್ಷ್ಮಿ’ ಯೋಜನೆಯನ್ನು ಅಂಚೆ ಇಲಾಖೆಯ ‘ಸುಕನ್ಯಾ ಸಮೃದ್ಧಿ’ ಜೊತೆ ವಿಲೀನಗೊಳಿಸಿದ್ದು, ಜಿಲ್ಲೆಯಲ್ಲಿ ಈ ಯೋಜನೆಯಡಿ 3250 ಫಲಾನುಭವಿಗಳಿಗೆ ಪಾಸ್ಬುಕ್/ಬಾಂಡ್ ವಿತರಣೆ ಬಾಕಿ ಇದೆ.
ಬಡತನ ರೇಖೆ ಕೆಳಗಿನ (ಬಿಪಿಎಲ್) ಕುಟುಂಬದ ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿ ನಿಟ್ಟಿನಲ್ಲಿ ‘ಭಾಗ್ಯಲಕ್ಷ್ಮಿ’ ಯೋಜನೆಯನ್ನು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಯೋಜನೆ ಅನುಷ್ಠಾನ ಹೊಣೆ ನಿರ್ವಹಿಸುತ್ತಿದೆ.
ಜಿಲ್ಲೆಯಲ್ಲಿ 2017–18ನೇ ಸಾಲಿನಿಂದ 2021–22ನೇ ಸಾಲಿನವರೆಗೆ 13,319 ಫಲಾನುಭವಿಗಳನ್ನು ಗುರುತಿಸಿದ್ದು, ಈ ಪೈಕಿ 3,250 ಮಂದಿಗೆ ಬಾಂಡ್/ಪಾಸ್ ಬುಕ್ ವಿತರಣೆ ಬಾಕಿ ಇದೆ.
‘ಭಾಗ್ಯಲಕ್ಷ್ಮಿ ಯೋಜನೆಗೆ 2018ರಲ್ಲಿ ಪುತ್ರಿಯ ಹೆಸರು ನೋಂದಣಿಯಾಗಿತ್ತು. ಫಲಾನುಭವಿ ಪಟ್ಟಿಯಲ್ಲಿ ಹೆಸರು ಇದೆ. ಈವರೆಗೆ ಬಾಂಡ್ ಅಥವಾ ಪಾಸ್ ಬುಕ್ ನೀಡಿಲ್ಲ’ ಎಂದು ಪೋಷಕಿ ಸಾವಿತ್ರಿ ಎಂಬವರು ‘ಪ್ರಜಾವಾಣಿ’ಗೆ ತಿಳಿಸಿದರು.
ಚಿಕ್ಕಮಗಳೂರು ತಾಲ್ಲೂಕಿನಲ್ಲಿ 2020–21ನೇ ಸಾಲಿನಲ್ಲಿ 416 ಹಾಗೂ ಹಾಗೂ 2021–22ನೇ ಸಾಲಿನಲ್ಲಿ 111 ಫಲಾನುಭವಿಗಳನ್ನು ಗುರುತಿಸಲಾಗಿದೆ. ಈ ಪೈಕಿ ಒಬ್ಬರಿಗೂ ಬಾಂಡ್/ಪಾಸ್ಬುಕ್ ವಿತರಿಸಿಲ್ಲ.
ಏನಿದು ಯೋಜನೆ: ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಹೆಣ್ಣು ಮಗುವಿನ ಹೆಸರಿನಲ್ಲಿ ಹಣ ಠೇವಣಿ ಇಟ್ಟು, 18 ವರ್ಷ ತುಂಬಿದಾಗ ಮೊತ್ತ ನೀಡುವ ಯೋಜನೆ ಇದು. ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ಮಾತ್ರ ಸವಲತ್ತು ಸಿಗುತ್ತದೆ.