ಸೋಮವಾರ ಬಟಿಂಡಾದಲ್ಲಿ ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸೇನಾಧಿಕಾರಿಗಳು ಹಾಗೂ ಪಂಜಾಬ್ ಪೊಲೀಸರು, ''ಘಟನೆ ಸಂಬಂಧ ಆರೋಪಿ ಮೋಹನ್ ದೇಸಾಯಿ ಎಂಬ ಯೋಧನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ವೈಯಕ್ತಿಕ ದ್ವೇಷದಿಂದ ಗುಂಡು ಹಾರಿಸಿರುವುದಾಗಿ ಯೋಧ ತಪ್ಪೊಪ್ಪಿಕೊಂಡಿದ್ದಾನೆ,'' ಎಂದು ಮಾಹಿತಿ ನೀಡಿದ್ದಾರೆ.
ಸಹೋದ್ಯೋಗಿಗಳ ವಿರುದ್ಧ ಸೇಡು
ಏ. 12 ರಂದು ಸೇನಾ ನೆಲೆಯಲ್ಲಿ ನಸುಕಿನ 4.30ರ ಸುಮಾರಿಗೆ ಗುಂಡಿನ ದಾಳಿ ನಡೆದಿತ್ತು. ಮಲಗಿದ್ದ ನಾಲ್ವರು ಯೋಧರ ಮೇಲೆ ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿತ್ತು. ''ಸೇನಾ ನೆಲೆಯಲ್ಲಿದ್ದ ಆರೋಪಿ ಯೋಧನಿಗೆ ಮೃತ ನಾಲ್ವರು ಯೋಧರು ಪದೇಪದೇ ಅವಮಾನ ಮಾಡಿ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದೇ ದ್ವೇಷಕ್ಕೆ ಹತ್ಯೆ ಮಾಡಿರುವುದಾಗಿ ಮೋಹನ್ ದೇಸಾಯಿ ಹೇಳಿಕೆ ನೀಡಿದ್ದಾನೆ,'' ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾಳಿ ನಡೆದ ದಿನ ಕ್ಯಾಂಪ್ನಲ್ಲಿದ್ದ ಒಂದು ಐಎನ್ಎಸ್ಎಎಸ್ ರೈಫಲ್ ನಾಪತ್ತೆಯಾಗಿತ್ತು. ಪೊಲೀಸರು ತನಿಖೆ ಕೈಗೊಂಡಾಗ, ಸೇನಾ ನೆಲೆಯ ಒಂದು ಭಾಗದಲ್ಲಿ ರೈಫಲ್ ಪತ್ತೆಯಾಗಿತ್ತು. ಅದರಲ್ಲಿದ್ದ ಗುಂಡುಗಳು ಖಾಲಿಯಾಗಿದ್ದವು. ಅನುಮಾನಗೊಂಡು ಆರೋಪಿ ಮೋಹನ್ ದೇಸಾಯಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ. ಬಂಧಿತ ಯೋಧನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಪಂಜಾಬ್ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಆರೋಪಿ ಯೋಧ ಮೋಹನ್ ದೇಸಾಯಿ ನೀಡಿದ ಮಾಹಿತಿ ಆಧರಿಸಿ ಇಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಬ್ಯಾರಕ್ನಿಂದ ಹೊರಬರುವುದನ್ನು ನೋಡಿದ್ದೆ ಎಂದು ದೇಸಾಯಿ ಮೋಹನ್ ಸುಳ್ಳು ಮಾಹಿತಿ ನೀಡಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಲಭ್ಯವಿರುವ ಪ್ರತಿ ಸಿಸಿಟಿವಿ ದೃಶ್ಯವನ್ನು ಸೂಕ್ಷ್ಮವಾಗಿ ವೀಕ್ಷಿಸಿದ ಅಧಿಕಾರಿಗಳು, ಇದು ಒಳಗಿನವರದೇ ಕೃತ್ಯವಾಗಿದೆ, ಭಯೋತ್ಪಾದನಾ ದಾಳಿ ಅಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದರು.