ಗೌರೀಶ್ರಿಗೆ ಗೋಕರ್ಣ, ಎಕ್ಕುಂಡಿಯವರಿಗೆ ಬಂಕಿಕೊಡ್ಲು, ಚಿತ್ತಾಲರಿಗೆ ಹನೇಹಳ್ಳಿ ಹೇಗೆ ವಿಶ್ವವನ್ನು ನೋಡಲು ತೆರೆದಿದ್ದ ‘ನೂರೆಂಟು ಕಿಟಕಿಗಳು’ ಆಗಿದ್ದವೊ ಅವುಗಳನ್ನೇ ವಿಷ್ಣು ನಾಯ್ಕರು ಅಂಕೋಲೆಯ ಅಂಬಾರಕೊಡ್ಲಿನ ತನ್ನ ಪರಿಮಳದ ಅಂಗಳದಲ್ಲಿ ತೆರೆದಿಟ್ಟರು. ರಾಜ್ಯದ ಭಿನ್ನ ಪ್ರದೇಶಗಳಿಂದ ಹಿರಿ-ಕಿರಿಯ ಲೇಖಕರನ್ನು ಆಹ್ವಾನಿಸಿ ಕಥೆ-ಕಾವ್ಯ ಕಮ್ಮಟ, ವಿಚಾರ ಗೋಷ್ಠಿ, ಸಂವಾದ, ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆಯ ಪ್ರಯೋಗ ಶಾಲೆಯನ್ನಾಗಿಸಿದರು. ಅವರ ಮನೆಯಂಗಳದ ಟಂಕಶಾಲೆಯನ್ನು ಪ್ರವೇಶಿಸಿದ ಎಳೆಯರಲ್ಲಿ ಸಾಹಿತ್ಯದ ಅಂತರ್ಜಲವನ್ನು ಕಾಣಿಸಿ, ಬರೆಯಿಸಿ, ಪ್ರಕಟಿಸಿ ಪ್ರೋತ್ಸಾಹಿಸಿದ್ದನ್ನು ಹೊಸತಲೆಮಾರಿನ ಲೇಖಕರು ಮರೆಯಲು ಸಾಧ್ಯವಿಲ್ಲ.