ಇವುಗಳ ನಡುವೆ ಮಾಜಿ ಪ್ರಧಾನಿ ಅಥವಾ ಅತಿ ಗಣ್ಯವ್ಯಕ್ತಿಯ ಕಾರು ಇರುತ್ತದೆ. ಅವರನ್ನು ಹಿಂಬಾಲಿಸುತ್ತಾ ಹಿರಿಯ ಅಧಿಕಾರಿಗಳ, ಇತರ ಮುಖ್ಯರ ಆಂಬ್ಯುಲೆನ್ಸ್, ಅಗ್ನಿಶಾಮಕ ದಳ ಇತ್ಯಾದಿ ವಾಹನಗಳು ಧಾವಿಸುತ್ತವೆ. ಒಮ್ಮೆ ಕಾನ್ವಾಯ್ನಲ್ಲಿ ಸೇರ್ಪಡೆಯಾದ ಮೇಲೆ ಮುಗಿಯಿತು. ಯಾವ ವಾಹನವೂ ಸ್ವತಂತ್ರವಾಗಿ ಅತ್ತಿತ್ತ ಹೋಗುವಂತಿಲ್ಲ. ರೈಲ್ವೇ ಬೋಗಿಯಂತೇ ಸಾಗಬೇಕು!.
ಆ ದಿನ ನನಗೆ ವೇದಿಕೆಯ ಪ್ರವೇಶದಲ್ಲಿ ಡ್ಯೂಟಿ. ಇತರ ಅಧಿಕಾರಿಗಳೊಂದಿಗೆ ಕಾಯುತ್ತಾ ನಿಂತಿದ್ದೆ. ಕಾರಿಳಿದು ಬರುವ ಮಾಜಿ ಪ್ರಧಾನಿಗಳನ್ನು ವೇದಿಕೆಗೆ ಬರಮಾಡಿಕೊಂಡು, ಅವರ ನಂತರ ಮತ್ತಾರೂ ಪ್ರವೇಶಿಸದಂತೆ ನಿರ್ಬಂಧಿಸುವ ಕೆಲಸ ನನ್ನದು.
ಅಕಸ್ಮಾತ್ ಪ್ರವೇಶಿಸಲು ಯಾರಾದರೂ ಪ್ರಮುಖ ಮಂತ್ರಿಗಳಿದ್ದಲ್ಲಿ, ಸೂಕ್ತ ತಪಾಸಣೆ ಮಾಡಿ ಒಳಬಿಡುವ ಹೊಣೆಗಾರಿಕೆಯೂ ಜೊತೆಗೂಡಿತ್ತು.
ಆ ಗೇಟಿನಲ್ಲೋ? ಮಂತ್ರಿಗಳಿಗಿಂತ ಕಂತ್ರಿಗಳದ್ದೇ ಕಾಟ. ತಾನೂ ಅತಿ ಮುಖ್ಯ ವ್ಯಕ್ತಿ ಎಂಬ ಪೋಸಿನೊಂದಿಗೆ ಬರುವ ನಕಲಿಗಳನ್ನು ತಡೆಯಲೇ ಬೇಕು. ಇಂತಹ ಕಡೆ ಜಟಾಪಟಿ ಮಾತು ಅನಿವಾರ್ಯ. ನಾನಾ ಪ್ರಮುಖರ ನೇರ ಪರಿಚಯ ನನಗಿದ್ದುದರಿಂದ ಆ ಜಾಗಕ್ಕೆ ನೇಮಕ ಮಾಡಿದ್ದರು.
ವಸ್ತು ಪ್ರದರ್ಶನ ಆವರಣವನ್ನು ಕಾನ್ವಾಯ್ ಪ್ರವೇಶಿಸಿತು ಎಂದು ಕಂಟ್ರೋಲ್ ರೂಂ ಹೇಳಿತು.
ರೊಯ್ಞ್... ರೊಂಯ್ಞ್... ಸೈರನ್ ಸದ್ದು ಮೊಳಗಿತು.
ಮಾಜಿ ಪ್ರಧಾನಿಗಳು ವೇದಿಕೆಗೆ ಬರಲು ಇದ್ದ ಸಮಯ ಕೇವಲ ನಾಲ್ಕಾರು ನಿಮಿಷ ಮಾತ್ರ.
ಎಲ್ಲರೂ ಜಾಗೃತರಾದರು. ಪೊಲೀಸರು ಜನಸಂದಣಿಯನ್ನು ಒಪ್ಪ ಮಾಡಿ ನಿಲ್ಲಿಸಿದರು. ಮೊದಲಿಗೆ ವಾರ್ನಿಂಗ್ ಜೀಪು, ಪೈಲೆಟ್ ವಾಹನಗಳು ಸಾಲಾಗಿ ಧಾವಿಸಿದವು. ನೋಡಿದರೆ ಮಾಜಿ ಪ್ರಧಾನಿಗಳ ಕಾರೇ ಇಲ್ಲ!