ದೇವರಹಿಪ್ಪರಗಿ: 110 ಕೆ.ವಿ. ವಿದ್ಯುತ್ ಉಪಕೇಂದ್ರ ವ್ಯಾಪ್ತಿಯ ಇ.ಐ.ಪಿ ಮಾರ್ಗದಲ್ಲಿ ಹಗಲಿನಲ್ಲಿ ಏಳು ಗಂಟೆ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ರೈತರು ಬುಧವಾರ ಹೆಸ್ಕಾಂ ಎಇಇ ಜಿ.ಎಸ್.ಅವುಟಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ರೈತಪ್ರತಿನಿಧಿ ಅಜೀಜ್ ಯಲಗಾರ ಮಾತನಾಡಿ, ‘ಈ ಮೊದಲು ಹಗಲಿನಲ್ಲಿ ಏಳು ಗಂಟೆ ವಿದ್ಯುತ್ ಪೂರೈಸುತ್ತಿದ್ದರಿಂದ ರೈತರು ಜಮೀನುಗಳಿಗೆ ನೀರು ಹಾಯಿಸಲು ಹಾಗೂ ಜಾನುವಾರಗಳಿಗೆ ನೀರುಣಿಸಲು ಸಹಕಾರಿಯಾಗಿತ್ತು. ಆದರೆ ಜ.16ರಿಂದ ಹಗಲು ನಾಲ್ಕು ಗಂಟೆ, ರಾತ್ರಿ ಮೂರು ಗಂಟೆ ವಿದ್ಯುತ್ ಸರಬರಾಜು ಆಗುತ್ತಿರುವುದರಿಂದ ರೈತರಿಗೆ ಸಮಸ್ಯೆಯಾಗಿದೆ’ ಎಂದು ತಿಳಿಸಿದರು.
‘ಬೆಳಿಗ್ಗೆಯೇ ಚಳಿ ಹೆಚ್ಚಿರುವುದರಿಂದ ವೃದ್ಧರು ಬೆಳೆಗಳಿಗೆ ನೀರು ಹಾಯಿಸುವುದು ಅವರ ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ಕೋವಿಡ್ ಸಮಯದಲ್ಲಿ ಎಲ್ಲರೂ ಆರೋಗ್ಯದತ್ತ ಕಾಳಜಿ ವಹಿಸಬೇಕಿದೆ. ಹಾಗಾಗಿ, ಹೆಸ್ಕಾಂ ಅಧಿಕಾರಿಗಳು ಮೊದಲಿನಂತೆಯೇ, ಹಗಲಿನಲ್ಲಿ ಏಳು ಗಂಟೆ ನೀಡಿ, ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಮನವಿ ಸಲ್ಲಿಸಿದರು.
110 ಕೆ.ವ್ಹಿ ವಿದ್ಯುತ್ ಉಪಕೇಂದ್ರದ ಅಡಿಯಲ್ಲಿ ಬರುವ ಇ.ಐ.ಪಿ ಮಾರ್ಗದಲ್ಲಿ ಹಗಲಿನಲ್ಲಿ ಏಳು ಗಂಟೆ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ರೈತರು ಹೆಸ್ಕಾಂ ಎಇಇ ಜಿ.ಎಸ್.ಅವುಟಿ ಅವರಿಗೆ ಮನವಿ ಸಲ್ಲಿಸಿದರು.