ಶಿರಸಿ: ಪಕ್ಷದ ವರಿಷ್ಠರು, ಸಂಘಟನೆ ಒಪ್ಪಿದರೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತೇನೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ಗೋಪಾಲಕೃಷ್ಣ ದೇವಸ್ಥಾನದ ಸಮುದಾಯ ಭವನ ಕಾಮಗಾರಿ ಭೂಮಿಪೂಜೆಗೆ ಸೋಮವಾರ ಆಗಮಿಸಿದ ವೇಳೆ ಮಾಧ್ಯಮದವರ ಜತೆ ಮಾತನಾಡಿದ ಅವರು ‘ಮುಂಬರುವ ವಿಧಾನಸಭೆ ಚುನಾವಣೆಗೆ ಶಿಕಾರಿಪುರದಿಂದ ಸ್ಪರ್ಧಿಸುತ್ತೀರಾ?’ ಎಂಬ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
‘ಯಡಿಯೂರಪ್ಪ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿದ್ದು ರಾಜಕೀಯ ಷಡ್ಯಂತ್ರವಲ್ಲ. ಅದು ತನಿಖಾದಳಗಳ ಸಹಜ ಪ್ರಕ್ರಿಯೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ ಸತ್ಯಕ್ಕೆ ದೂರವಾಗಿದೆ’ ಎಂದರು.
‘ಯಡಿಯೂರಪ್ಪ ಅವರ ಕಚೇರಿಯಲ್ಲಿ ಉಮೇಶ್ ಹಲವು ವರ್ಷ ಕೆಲಸ ಮಾಡಿದ್ದು ನಿಜ. ಅವರ ತನಿಖೆ ಪಾರದರ್ಶಕವಾಗಿ ನಡೆಯಲಿದೆ. ಆ ಬಳಿಕ ಸತ್ಯಾಸತ್ಯತೆ ಸ್ಪಷ್ಟವಾಗಲಿದೆ’ ಎಂದು ಪ್ರತಿಕ್ರಿಯಿಸಿದರು.
‘ಯಡಿಯೂರಪ್ಪ ಹಾಗೂ ನಮ್ಮನ್ನು ಬಿಜೆಪಿ ಬೆಳೆಸಿದೆ. ಪಕ್ಷ ಎಂದಿಗೂ ನಮಗೆ ತಾಯಿಯಂತೆ. ಯಡಿಯೂರಪ್ಪ ಅವರನ್ನು ಪಕ್ಷ ಕಡೆಗಣಿಸುವ ಪ್ರಶ್ನೆಯೆ ಇಲ್ಲ. ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಗೆಲ್ಲಲಿದೆ’ ಎಂದರು.
ಪಕ್ಷದ ವರಿಷ್ಠರು, ಸಂಘಟನೆ ಒಪ್ಪಿದರೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತೇನೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.