ರಾಮನಗರ ಹೊರವಲಯದಲ್ಲಿರುವ ಬಿಳಗುಂಬ ರಸ್ತೆಯಲ್ಲಿ ಗುರುವಾರ ರಾತ್ರಿ ಇಂತಹದ್ದೊಂದು ಘಟನೆ ನಡೆದಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. ರಾಮನಗರದಿಂದ ಬಿಳಗುಂಬಕ್ಕೆ ಸಂಪರ್ಕ ಕಲ್ಪಿಸುವ ಹಾದಿಯಲ್ಲಿ ನಾಗಪ್ಪನ ಬಾರೆಯಲ್ಲಿ ರಸ್ತೆಗೆ ಅಡ್ಡಲಾಗಿ ತಂತಿ ಕಟ್ಟಿ, ದರೋಡೆ ಮಾಡಲು ಕಳ್ಳರು ಯತ್ನಿಸಿದ್ದಾರೆ. ಆದರೆ, ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಅನಾಹುತ ತಪ್ಪಿದೆ. ಬಿಳಗುಂಬ ಗ್ರಾಮದ ನಂಜುಂಡ ಎಂಬುವವರು ರಾಮನಗರದ ಸಂತೋಷ್ ಬಾರ್ನಲ್ಲಿ ವ್ಯಾಪಾರ ಮುಗಿಸಿ ಹಣ ತೆಗೆದುಕೊಂಡು ರಾತ್ರಿ 11ರ ವೇಳೆಗೆ ಬಿಳಗುಂಬಕ್ಕೆ ವಾಪಸ್ ಆಗುತ್ತಿದ್ದರು. ಈ ವೇಳೆ ವಿದ್ಯುತ್ ಕಂಬದಿಂದ ಮರಕ್ಕೆ ತಂತಿಯನ್ನು ಬಿಗಿದು ಕೆಳಗೆ ಬೀಳಿಸಿ ದರೋಡೆಗೆ ಪ್ರಯತ್ನಿಸಲಾಗಿದೆ.