ಅಮೀನಗಡ (ಕವಿತಾಳ): ‘ಮಣ್ಣಿನ ಗುಣಧರ್ಮ ಆಧರಿಸಿ ನೀರು ಹಿಂಗುವಿಕೆಯ ಸಾಮರ್ಥ್ಯಕ್ಕೆ ಅನಗುಣವಾಗಿ ಜಲಾನಯನ ಕಾಮಗಾರಿಗಳನ್ನು ಕೈಗೊಳ್ಳಲು ಸ್ಥಳೀಯರು ಸೂಕ್ತ ಮಾಹಿತಿ ನೀಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ್ ಹೇಳಿದರು.
ಫೌಂಡೇಶನ್ ಫಾರ್ ಎಕೋಲಾಜಿಕಲ್ ಸೆಕ್ಯೂರಿಟಿ (ಎಫ್ಇಎಸ್) ಸಂಸ್ಥೆಯ ವತಿಯಿಂದ ಮಸ್ಕಿ ತಾಲ್ಲೂಕಿನ ಅಮೀನಗಡ ಗ್ರಾಮದಲ್ಲಿ ಮಂಗಳವಾರ ನಡೆದ ‘ದಿಣ್ಣೆಯಿಂದ ತಗ್ಗಿನೆಡೆಗೆ’ ಪ್ರಾಯೋಗಿಕ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಂತರ್ಜಲ ಮಟ್ಟ ಹೆಚ್ಚಿಸುವುದು, ಮಣ್ಣಿನ ತೇವಾಂಶ ಕಾಪಾಡುವುದರ ಜತೆಗೆ ಸ್ಥಳೀಯ ಸಂಪನ್ಮೂಲಗಳ ಬಳಕೆ ಕುರಿತು ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ಕ್ರಿಯಾಯೋಜನೆ ರೂಪಿಸಲು ಸಂಸ್ಥೆ ಮೂರು ವರ್ಷಗಳ ಅವಧಿಗೆ ಸರ್ಕಾರದೊಂದಿಗೆ ಆರ್ಥಿಕ ರಹಿತ ಒಪ್ಪಂದ ಮಾಡಿಕೊಂಡಿದೆ’ ಎಂದರು.
ಸಂಸ್ಥೆಯ ಜಿಲ್ಲಾ ಘಟಕದ ಸಂಯೋಜಕ ಖಾದರ್ ಬಾಶಾ ಮಾತನಾಡಿ, ‘ಸೂಕ್ತ ಸ್ಥಳದಲ್ಲಿ ಸೂಕ್ತ ಕಾಮಗಾರಿ ಕೈಗೊಳ್ಳುವ ಕುರಿತು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸುವುದು, ಸ್ಥಳೀಯ, ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ನರೇಗಾ ಯೋಜನೆಯಡಿ ಪರಿಸರ ಕಾಪಾಡುವುದರ ಜತೆಗೆ ನೀರು ಹಿಂಗಿಸುವಿಕೆ ಬಗ್ಗೆ ಸಂಸ್ಥೆ ಕ್ರಿಯಾಯೋಜನೆ ತಯಾರಿಸುತ್ತದೆ’ ಎಂದರು.
ಸಂಸ್ಥೆಯ ಜಿಲ್ಲಾ ಘಟಕದ ಸಂಯೋಜಕ ಶಂಕರಗೌಡ, ತಾಲ್ಲೂಕು ಘಟಕದ ಸಂಯೋಜಕ ಶಿವಲಿಂಗಯ್ಯ, ತಾಂತ್ರಿಕ ಸಿಬ್ಬಂದಿ ಸತೀಶ್, ಶಿವಕುಮಾರ, ನಫೀಸಾ ಬೇಗಂ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶರೀಫ್ ಹಾಗೂ ಗ್ರಾಮಸ್ಥರು ಇದ್ದರು.
ಅಮೀನಗಡ (ಕವಿತಾಳ): ‘ಮಣ್ಣಿನ ಗುಣಧರ್ಮ ಆಧರಿಸಿ ನೀರು ಹಿಂಗುವಿಕೆಯ ಸಾಮರ್ಥ್ಯಕ್ಕೆ ಅನಗುಣವಾಗಿ ಜಲಾನಯನ ಕಾಮಗಾರಿಗಳನ್ನು ಕೈಗೊಳ್ಳಲು ಸ್ಥಳೀಯರು ಸೂಕ್ತ ಮಾಹಿತಿ ನೀಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ್ ಹೇಳಿದರು.