ಈ ಕುರಿತು ಸೋಮವಾರ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ‘ಕೊಲೆಯಾದ ಧನುಷ್ ಪಚ್ಚನಾಡಿ, ಅ.15ರಂದು ಪಂಪ್ವೆಲ್ ಬಳಿಯ ವಸತಿಗೃಹದಲ್ಲಿ ಗೆಳೆಯರಾದ ಜಾಯ್ಸನ್, ಪ್ರಮೀತ್, ಕಾರ್ತಿಕ್, ಪ್ರಜ್ವಲ್ ಹಾಗೂ ದುರ್ಗೇಶ್ ಜತೆ ಪಾರ್ಟಿ ಮಾಡುತ್ತಿದ್ದರು. ಧನುಷ್ ಈ ಹಿಂದೆ ಗೆಳೆಯರ ಜತೆ ಮಾತನಾಡುವ ಸಂದರ್ಭದಲ್ಲಿ ಅವಾಚ್ಯ ಪದಗಳನ್ನು ಬಳಸಿದ ಬಗ್ಗೆ ಉಳಿದವರಿಗೆ ಬೇಸರ ಇತ್ತು. ಅದನ್ನು ರಾಜಿ ಪಂಚಾಯ್ತಿ ಮೂಲಕ ಬಗೆಹರಿಸುವ ನಿಟ್ಟಿನಲ್ಲಿ ದುರ್ಗೇಶ್ ಮೂಲಕ ಧನುಷ್ ಅವರನ್ನೂ ಇತರರು ವಸತಿಗೃಹಕ್ಕೆ ಕರೆಸಿಕೊಂಡಿದ್ದರು. ಪರಸ್ಪರ ಮಾತುಕತೆಯ ವೇಳೆ ಜಗಳ ಉಂಟಾಗಿದೆ. ಜಗಳ ಹಲ್ಲೆಗೆ ತಿರುಗಿದೆ. ಈ ವೇಳೆ ಜಾಯ್ಸನ್ ತನ್ನಲ್ಲಿದ್ದ ಹರಿತವಾದ ಆಯುಧದಿಂದ ಧನುಷ್ ಎದೆಗೆ ಚುಚ್ಚಿ ಕೊಲೆ ಮಾಡಿದ್ದಾರೆ. ನಂತರ ಆರೋಪಿಗಳು ಘಟನೆ ಸ್ಥಳದಿಂದ ಪರಾರಿಯಾಗಿದ್ದರು’ ಎಂದರು.