×
ADVERTISEMENT
ಈ ಕ್ಷಣ :
ADVERTISEMENT

ಮೊಳಕಾಲ್ಮುರು: ವಾರದ ಸಂತೆ ಸ್ಥಳ ಸಮಸ್ಯೆ ಹೆಚ್ಚಳ

ರಸ್ತೆ ವಿಸ್ತರಣೆಯಿಂದ ಸಮಸ್ಯೆ ಇನ್ನಷ್ಟು ಕಗ್ಗಂಟಾಗುವ ಆತಂಕ
Published : 18 ಜನವರಿ 2022, 5:31 IST
ಫಾಲೋ ಮಾಡಿ
Comments

ಮೊಳಕಾಲ್ಮುರು: ಪಟ್ಟಣದಲ್ಲಿ ಹಲವು ದಶಕಗಳಿಂದ ಕಾಡುತ್ತಿರುವ ವಾರದ ಸಂತೆ ಸ್ಥಳ ಸಮಸ್ಯೆಯು ಈಗ ಇನ್ನಷ್ಟು ಹೆಚ್ಚಳವಾಗುವುದು ಸ್ಪಷ್ಟವಾಗಿದೆ.

ಇಲ್ಲಿ ಹಾದು ಹೋಗಿರುವ ಹಾನಗಲ್- ರಾಯದುರ್ಗ ಮುಖ್ಯರಸ್ತೆಯಲ್ಲಿ ಪ್ರತಿ ಬುಧವಾರ ವಾರದ ಸಂತೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಸುತ್ತಮುತ್ತಲ 40ಕ್ಕೂ ಹೆಚ್ಚು ಗ್ರಾಮಗಳ ಜನರು ಇಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬಂದು ಹೋಗುತ್ತಾರೆ. ಈವರೆಗೂ ಸೂಕ್ತ ಸ್ಥಳ ನಿಗದಿಯಾಗದ ಪರಿಣಾಮವಾಗಿ ಮುಖ್ಯರಸ್ತೆಗಳ ಇಕ್ಕೆಲದಲ್ಲಿ ಪ್ರಾಣಾಪಾಯದ ಆತಂಕದಲ್ಲಾ ಗ್ರಾಹಕರ ಖರೀದಿ, ವ್ಯಾಪಾರಿಗಳ ವಹಿವಾಟು ನಡೆದುಕೊಂಡು ಬಂದಿದೆ.

ಈಗ ಏಕಾಏಕಿ ಈ ಮುಖ್ಯರಸ್ತೆಯನ್ನು ವಿಸ್ತರಣೆ ಮಾಡಲು ಮುಂದಾಗಿರುವುದು ಮುಂದಿನ ದಿನಗಳಲ್ಲಿ ಸಂತೆಯನ್ನು ಎಲ್ಲಿ ನಡೆಸಬೇಕು ಎಂಬ ಸಮಸ್ಯೆಯನ್ನು ತಂದೊಡ್ಡಿದೆ. ₹ 33 ಕೋಟಿ ವೆಚ್ಚದ ವಿಸ್ತರಣೆ ಕಾಮಗಾರಿಗೆ ಈಚೆಗೆ ಸಚಿವ ಬಿ. ಶ್ರೀರಾಮುಲು ಚಾಲನೆ ನೀಡಿದ್ದು, ಒಂದು ವರ್ಷದ ಒಳಗೆ ಪೂರ್ಣಗೊಳಿಸಲು ಸೂಚಿಸಿದ್ದಾರೆ. ಪಟ್ಟಣ ಹೊರಭಾಗದಲ್ಲಿ ಕಾಮಗಾರಿ ಆರಂಭವಾಗಿದ್ದು, ಒಳಭಾಗದಲ್ಲಿ ನಡೆದಾಗ ಸಂತೆಯನ್ನು ಎಲ್ಲಿ ನಡೆಸಬೇಕು ಎಂಬ ಜಿಜ್ಞಾಸೆ ವ್ಯಾಪಾರಿಗಳಿಗೆ
ಎದುರಾಗಿದೆ.

ಹತ್ತಾರು ವರ್ಷಗಳಿಂದ ರೈತಸಂಘ, ಸಂತೆ ವ್ಯಾಪಾರಿಗಳು ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ವಾರದ ಸಂತೆಯನ್ನು ನಡೆಸಲು ಸ್ಥಳ ನಿಗದಿ ಮಾಡುವಂತೆ ಅನೇಕ ಪ್ರತಿಭಟನೆಗಳನ್ನು ನಡೆಸಿದೆ. ಪಲ್ಲಳ್ಳಿ ತಿಮ್ಮಪ್ಪ ಬಡಾವಣೆ, ಕೋರ್ಟ್ ಹಿಂಭಾಗದ ಕೆರೆ ಆವರಣ, ಮಿನಿ ವಿಧಾನಸೌಧ ಬಳಿ ಸ್ಥಳ ನಿಗದಿ ಮಾಡಲಾಗುತ್ತಿದೆ ಎಂಬ ಭರವಸೆ ನೀಡಲಾಗಿತ್ತು. ಆದರೆ ಎಲ್ಲಿಯೂ ನಿಗದಿಯಾಗಿಲ್ಲ. ಈಗ ರಸ್ತೆ ವಿಸ್ತರಣೆಯಿಂದ ಸಮಸ್ಯೆ ಕಗ್ಗಂಟಾಗುವುದು ಖಚಿತವಾಗಿದ್ದು, ಹೊಸ ಪ್ರಯತ್ನಗಳಿಗೆ ಪಟ್ಟಣ ಪಂಚಾಯಿತಿ ಮುಂದಾಗಿದೆ ಎನ್ನಲಾಗಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ. ಲಕ್ಷ್ಮಣ್ ಶನಿವಾರ ‘ಪ್ರಜಾವಾಣಿ’ ಜತೆ ಮಾತನಾಡಿ, ‘ರಸ್ತೆ ವಿಸ್ತರಣೆ ಕಾರ್ಯ ಆರಂಭವಾಗಿದೆ, ವಿದ್ಯುತ್ ಕಂಬಗಳ ಸ್ಥಳಾಂತರದ ನಂತರ ಒಳಗಡೆ ಕಾರ್ಯ ಆರಂಭವಾಗಲಿದೆ. ವಾರದ ಸಂತೆಗೆ ವಿಸ್ತರಣೆಯ ನಂತರ ತೊಂದರೆಯಾಗುವುದು ನಿಜ. ಮಿನಿ ವಿಧಾನಸೌಧ ಬಳಿ ಸ್ಥಳ ಪರಿಶೀಲಿಸಲಾಗಿತ್ತು. ಆದರೆ ಹೊಂದಾಣಿಕೆಯಾಗಲಿಲ್ಲ. ಅಂತಿಮ
ವಾಗಿ ತಾಲ್ಲೂಕು ಕಚೇರಿಯ ಹಿಂಭಾಗದ ರಸ್ತೆಯಲ್ಲಿರುವ ತಹಶೀಲ್ದಾರ್ ವಸತಿಗೃಹ, ಲೋಕೋಪಯೋಗಿ ಇಲಾಖೆ ಸಿಬ್ಬಂದಿ ವಸತಿ ಗೃಹಗಳ ಸ್ಥಳವನ್ನು ಪಶಕ್ಕೆ ಪಡೆದು ಸಂತೆಮೈದಾನ ನಿರ್ಮಿಸುವ ಕ್ರಮಕ್ಕೆ ಮುಂದಾಗಿದ್ದೇವೆ’ ಎಂದು ಹೇಳಿದರು.

ಈ ಸ್ಥಳದಲ್ಲಿರುವ ವಸತಿಗೃಹಗಳು ತರಕಾರಿ ಮಾರುಕಟ್ಟೆ, ವಾರದ ಸಂತೆ, ಫುಡ್‌ ಪಾರ್ಕ್ ಸ್ಥಾಪನೆಗೆ ಸೂಕ್ತವಾಗಿದ್ದು ವಶಕ್ಕೆ ಪಡೆಯಲು ಮನವಿ ಮಾಡುವಂತೆ ಈಚೆಗೆ ಸಚಿವ ಬಿ. ಶ್ರೀರಾಮುಲು ಮೌಖಿಕವಾಗಿ ಸೂಚಿಸಿದ್ದಾರೆ. ಇದರಂತೆ ಸ್ಥಳವನ್ನು ತಮ್ಮ ವಶಕ್ಕೆ ನೀಡಿ ಹೊಸದಾಗಿ ಹಾನಗಲ್ ಕ್ರಾಸ್‌ ನಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸುವಂತೆ ಲೋಕೋಪಯೋಗಿ ಜಿಲ್ಲಾ ಎಂಜಿನಿಯರ್‌ಗೆ ಮನವಿ ಸಲ್ಲಿಸಿದೆ ಎಂದು ಹೇಳಿದರು.

ಸಮಸ್ಯೆ ಪರಿಹಾರಕ್ಕೆ ಇದು ಸೂಕ್ತ ಮಾರ್ಗವಾಗಿದ್ದು ಸಚಿವರ ಗಮನಕ್ಕೆ, ಜಿಲ್ಲಾಡಳಿತ ಗಮನಕ್ಕೆ ತಂದು ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಲಕ್ಷ್ಮಣ್ ಭರವಸೆ ನೀಡಿದರು.

......

ವಾರದ ಸಂತೆಗೆ ಸ್ಥಳವನ್ನು ಕೂಡಲೇ ನಿಗದಿ ಮಾಡಬೇಕು. ರೈತರು ಹಲವು ವರ್ಷಗಳಿಂದ ಕಷ್ಟಪಡುತ್ತಿದ್ದಾರೆ. ಈ ಕುರಿತು ಸಂಘವು ಶೀಘ್ರವೇ ಪ್ರತಿಭಟನೆ ನಡೆಸಲಿದೆ.

ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ರೈತಸಂಘ ರಾಜ್ಯ ಮುಖಂಡರು

......

ಲೋಕೋಪಯೋಗಿ, ತಹಶೀಲ್ದಾರ್ ವಸತಿಗೃಹಗಳನ್ನು ವಶಕ್ಕೆ ಪಡೆದು ಸಂತೆಮೈದಾನ ನಿರ್ಮಿಸುವ ಮನವಿ ಬಂದಿದೆ. ಸಾಧ್ಯತೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮಕ್ಕೆ ನಿರ್ದೇಶಿಸಲಾಗುವುದು.

-ಬಿ. ಶ್ರೀರಾಮುಲು, >ಜಿಲ್ಲಾ ಉಸ್ತುವಾರಿ ಸಚಿವ

- ಕೊಂಡ್ಲಹಳ್ಳಿ ಜಯಪ್ರಕಾಶ ಮೊಳಕಾಲ್ಮುರು: ಪಟ್ಟಣದಲ್ಲಿ ಹಲವು ದಶಕಗಳಿಂದ ಕಾಡುತ್ತಿರುವ ವಾರದ ಸಂತೆ ಸ್ಥಳ ಸಮಸ್ಯೆಯು ಈಗ ಇನ್ನಷ್ಟು ಹೆಚ್ಚಳವಾಗುವುದು ಸ್ಪಷ್ಟವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT