ಚಿಕ್ಕಬಳ್ಳಾಪುರ: ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಸಿಪಿಎಂ ಕಾರ್ಯಕರ್ತರು ನಗರದ ಶಿಡ್ಲಘಟ್ಟ ವೃತ್ತ ದಲ್ಲಿ ಸೋಮವಾರ ಪ್ರತಿಭಟಿಸಿದರು.
ಬಲವಂತದ ಮತಾಂತರವನ್ನು ಸಿಪಿಎಂ ಖಂಡಿಸುತ್ತದೆ. ಆದರೆ, ಕೋಮುವಾದಿಗಳಿಗೆ ಮತ್ತು ಜಾತಿವಾದಿಗಳಿಗೆ ನೆರವಾಗುವ ಉದ್ದೇಶದಿಂದ ಈ ಕಾಯ್ದೆ ಜಾರಿಗೊಳಿಸಲಾಗಿದೆ. ಯಾರೇ ವ್ಯಕ್ತಿ ತನಗೆ ಇಷ್ಟ ಬಂದ ಮತವನ್ನು ಅನುಸರಿಸುವುದಕ್ಕೆ ಸರ್ಕಾರದ ಅನುಮತಿ ಪಡೆಯಬೇಕಾಗಿದೆ. ಈ ಮೂಲಕ ವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಪ್ರತಿಭಟನಕಾರರು ದೂರಿದರು.
ಮತಾಂತರ ನಿಷೇಧ ಕಾಯ್ದೆಯನ್ನು ಈ ಕೂಡಲೇ ಮುಖ್ಯಮಂತ್ರಿ ವಾಪಸ್ ಪಡೆಯಬೇಕು. ಈ ಕಾಯ್ದೆಯು ಮತಾಂತರ ಆದವರ ಮೇಲೆ ಮತ್ತು ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರ ಮೇಲೆ ಹಲ್ಲೆ ನಡೆಸಲು ಪ್ರೇರೇಪಿಸುತ್ತದೆ ಎಂದರು.
ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆ ಹೆಸರಿನಲ್ಲಿ ಈ ಕಾಯ್ದೆ ಅಸ್ಪೃಶ್ಯತೆಯ ಆಚರಣೆಯನ್ನು ಸಮರ್ಥಿಸುತ್ತದೆ. ಜಾತಿ ತಾರತಮ್ಯಕ್ಕೆ ಅವಕಾಶ ಆಗುತ್ತದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಿಪಿಎಂ ತಾಲ್ಲೂಕು ಗೌರವ ಕಾರ್ಯದರ್ಶಿ ಸಿದ್ದಗಂಗಪ್ಪ, ಕಾರ್ಯದರ್ಶಿ ಬಿ.ಎನ್. ಮುನಿಕೃಷ್ಣಪ್ಪ, ಎಚ್.ಪಿ. ಲಕ್ಷ್ಮಿನಾರಾಯಣ್, ರಘುರಾಮರೆಡ್ಡಿ, ಮಹಮ್ಮದ್ ಅಕ್ರಮ್, ನಾಗರಾಜ್, ಜಯರಾಮರೆಡ್ಡಿ, ಅಶ್ವತ್ಥನಾರಾಯಣ್, ಶ್ರೀರಾಮಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಸಿಪಿಎಂ ಕಾರ್ಯಕರ್ತರು ನಗರದ ಶಿಡ್ಲಘಟ್ಟ ವೃತ್ತ ದಲ್ಲಿ ಸೋಮವಾರ ಪ್ರತಿಭಟಿಸಿದರು.