ಪ್ರಜಾವಾಣಿ ವಾರ್ತೆ ಸಿರುಗುಪ್ಪ: 'ಚಿಪ್ಪಿಗೆ ಜನಾಂಗದ 2ಎ ಮೀಸಲಾತಿಯನ್ನು ಕಸಿಯುವ ಹುನ್ನಾರ ನಡೆದಿದ್ದು, ಅಧಿಕಾರಿಗಳು ಒತ್ತಡಕ್ಕೆ ಮಣಿಯದೆ ಸಂವಿಧಾನಾತ್ಮಕ ಮೀಸಲಾತಿ ಸೌಲಭ್ಯವನ್ನು ನೀಡಬೇಕು' ಎಂದು ತಾಲ್ಲೂಕು ಗಾಣಿಗ, ಚಿಪ್ಪಿಗ ಸಂಘದ ಅಧ್ಯಕ್ಷ ಶಾಬಾದಿ ಸುಧಾಕರ ಆಗ್ರಹಿಸಿದರು.
ತಾಲ್ಲೂಕು ಗಾಣಿಗ, ಚಿಪ್ಪಿಗ ಸಮಾಜದ ವತಿಯಿಂದ 2ಎ ಮೀಸಲಾತಿ ಪ್ರಮಾಣ ಪತ್ರ ನೀಡಿಕೆ ವಿಳಂಬ ಹಾಗೂ ಕೆಲ ಸಮಾಜದ ಮುಖಂಡರು ಚಿಪ್ಪಿಗ ಜನಾಂಗಕ್ಕೆ 2ಎ ಪ್ರಮಾಣ ಪತ್ರ ನೀಡಬಾರದು ಎಂಬ ಮನವಿ ವಿರೋಧಿಸಿ ತಹಶೀಲ್ದಾರ್ ಎಚ್.ವಿಶ್ವನಾಥ ಅವರಿಗೆ ಬುಧವಾರ ಮನವಿ ಸಲ್ಲಿಸಿ ಮಾತನಾಡಿದರು.
ಹಾವನೂರು ವರದಿ ನಂತರ ಉಪಜಾತಿ ಕಾಲಂನಲ್ಲಿ ಚಿಪ್ಪಿಗ ಎಂದು ನಮೂದಿಸಿದ್ದು, ದಾಖಲೆಗಳನ್ನು ಒದಗಿಸಲಾಗಿದೆ. ಅದಲ್ಲದೆ ಇಲಾಖಾ ಅಧಿಕಾರಿಗಳು ಮಹಜರು ನಡೆಸಿ ವರದಿ ಸಲ್ಲಿಸಿದ್ದಾರೆ. ಇದರ ಹೊರತಾಗಿಯೂ ಕೆಲವರು ಚಿಪ್ಪಿಗ ಜನಾಂಗಕ್ಕೆ ಇವರು ಸೇರಿಲ್ಲ ಎಂದು ಇಡೀ ಸಮಾಜವನ್ನು ಅವಮಾನಿಸುತ್ತಿದ್ದಾರೆ ಎಂದು ನಿವೃತ್ತ ಶಿಕ್ಷಕ ಮಲ್ಲಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಚಿಪ್ಪಿಗ ಜನಾಂಗಕ್ಕೆ 2ಎ ಪ್ರಮಾಣಪತ್ರ ನೀಡುವಲ್ಲಿ ವಿಳಂಬ ಮಾಡಬಾರದು ಎಂದು ಕಂದಗಲ್ ವೀರಣ್ಣ ಹೇಳಿದರು.
ಕಾರ್ಯಕ್ರಮದಲ್ಲಿ ಎಸ್. ವೀರೇಶ, ಬಸವರಾಜ, ಎನ್. ಜಿ ಶಿವಕುಮಾರ, ಎಸ್.ಪ್ರಸಾದ, ಕರೂರು ಮಲ್ಲಯ್ಯ ಭಾಗವಹಿಸಿದ್ದರು.