ಕಲಬುರ್ಗಿ: ‘ಬಾಗಲಕೋಟೆ ಜಿಲ್ಲೆಯ ಬದಾಮಿಯಲ್ಲಿ ಲಲಿತಕಲಾ ವಿಶ್ವವಿದ್ಯಾಲಯವನ್ನು ಶೀಘ್ರ ಸ್ಥಾಪನೆ ಮಾಡಬೇಕು’ ಎಂದು ಕಲಾವಿದ ಡಾ.ಅಶೋಕ ಶೆಟಕಾರ ಆಗ್ರಹಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ವಿಧಾನ ಪರಿಷತ್ನಲ್ಲಿ ಈಚೆಗೆ ಕರ್ನಾಟಕ ಲಲಿತಕಲಾ ವಿಶ್ವವಿದ್ಯಾಲಯ ಸ್ಥಾಪನೆ ಅನಗತ್ಯ ಖರ್ಚಿಗೆ ದಾರಿ ಎಂದು ಹೇಳಿದ್ದಾರೆ. ಕಲೆಗಳ ಬಗ್ಗೆ ತಿಳಿಯದೆ ಅವರು ಮಾತನಾಡಿದ್ದಾರೆ’ ಎಂದು ಟೀಕಿಸಿದರು.
ಹಿರಿಯ ಕಲಾವಿದರಾದ ಜೆ.ಎಸ್.ಖಂಡೇರಾವ್ ಮತ್ತು ಡಾ.ಎ.ಎಸ್.ಪಾಟೀಲ ಮಾತನಾಡಿ, ‘ಲಲಿತಕಲಾ ವಿಶ್ವವಿದ್ಯಾಲಯ ಸ್ಥಾಪನೆಗಾಗಿ 450 ಎಕರೆ ಜಾಗ ಇದೆ. ಅಲ್ಲದೆ, ರಾಜ್ಯದಲ್ಲಿ 8 ಚಿತ್ರಕಲಾ ಸ್ನಾತಕೋತ್ತರ ಕೇಂದ್ರಗಳಿವೆ. 82 ಕಾಲೇಜುಗಳಿವೆ. 50ಕ್ಕಿಂತ ಹೆಚ್ಚು ಜನ ಪಿಎಚ್.ಡಿ ಪದವಿ ಪಡೆದಿದ್ದಾರೆ. ಪ್ರತಿ ವರ್ಷ 3,500ರಿಂದ 4,000 ಕಲಾವಿದರು ಚಿತ್ರಕಲಾ ಪದವಿ ಪಡೆಯುತ್ತಿದ್ದಾರೆ’ ಎಂದು ವಿವರಿಸಿದರು.‘ವಿಶೇಷ ಅಧಿಕಾರಿ ಎಸ್.ಸಿ.ಪಾಟೀಲ ಅವರು ವಿಶ್ವವಿದ್ಯಾಲಯ ಸ್ಥಾಪನೆ ಅಗತ್ಯವಿದೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ.