ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಅಯೋಧ್ಯೆ ಭೇಟಿ ಕುರಿತು ಪ್ರತಿಕ್ರಿಯೆ ನೀಡಿರುವ ಶಿವಸೇನಾ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್, ಅವರು ನಮ್ಮನ್ನು ನಕಲು ಮಾಡುತ್ತಿದ್ದಾರೆ. ಅಸಲಿ ಯಾವುದು, ನಕಲಿ ಯಾವುದು ಎಂಬುದು ಜನರಿಗೆ ಗೊತ್ತಿದೆ ಎಂದು ಹೇಳಿದ್ದಾರೆ. ಈ ಕುರಿತು ಸುದ್ದಿಸಂಸ್ಥೆ 'ಎಎನ್ಐ' ಟ್ವೀಟ್ ಮಾಡಿದೆ. ಮಹಾರಾಷ್ಟ್ರದಲ್ಲಿ ಆಲಿಕಲ್ಲು ಮಳೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಈ ಎಲ್ಲ ಸಮಸ್ಯೆಗಳನ್ನು ನಿರ್ಲಕ್ಷಿಸಿ ರಾಜ್ಯ ಸರ್ಕಾರ ಅಯೋಧ್ಯೆಗೆ ಹೊರಟಿದೆ. ಶ್ರೀರಾಮನು ಅವರನ್ನು ಆಶೀರ್ವದಿಸುತ್ತಾರೆಯೇ ಎಂದು ರಾವುತ್ ಪ್ರಶ್ನೆ ಮಾಡಿದ್ದಾರೆ. ನಮಗೂ ರಾಮನ ಮೇಲೆ ನಂಬಿಕೆಯಿದೆ. ನಾವು ಕೂಡಾ ಅಯೋಧ್ಯೆಗೆ ಹಲವು ಬಾರಿ ಹೋಗಿದ್ದೇವೆ. ಆದರೆ ಬಿಜೆಪಿ ನಮ್ಮ ಪಕ್ಷದೊಂದಿಗೆ ಎಂದೂ ಬಂದಿಲ್ಲ. ಬಾಬ್ರಿ ಘಟನೆ ನಡೆದಾದಲೂ ಓಡಿ ಹೋಗಿದ್ದರು ಎಂದು ಅವರು ಟೀಕೆ ಮಾಡಿದ್ದಾರೆ. ಅಯೋಧ್ಯೆಗೆ ಭೇಟಿ ನೀಡುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂದೆ, ರಾಮ ಜನ್ಮಭೂಮಿ ದೇವಾಲಯದ ನಿರ್ಮಾಣ ಕಾರ್ಯವನ್ನು ವೀಕ್ಷಣೆ ಮಾಡಲಿದ್ದಾರೆ.