ADVERTISEMENT

ಚುರುಮುರಿ: ಪ್ರಜಾಸದರ

ಲಿಂಗರಾಜು ಡಿ.ಎಸ್
Published 11 ಅಕ್ಟೋಬರ್ 2021, 19:31 IST
Last Updated 11 ಅಕ್ಟೋಬರ್ 2021, 19:31 IST
Churumuri-12102021.jpg
Churumuri-12102021.jpg   

ದಸರಾ ನೋಡಮು ಅಂತ ಬಂದೋರು ಮೈಸೂರುಪಾಕು ತಿಂದು ದೊಡ್ಡಗಡಿಯಾರದ ಮುಂದೆ ಚಟ್ಟೆಕ್ಕಾರನ ಥರಾ ಓಡಾಡ್ತಿದ್ದೋ. ಅಂಬಾರಿ ಹೊರೋ ಆನೆ ನೋಡಿ, ಎಂಥಾ ಅದೃಷ್ಟವಂತ ಪ್ರಾಣಿಗಳು ಇವು ಅನ್ನಿಸಿ ತುರೇಮಣೆಗೆ ಹೇಳಿದೆ.

‘ಆನೆ ನೋಡ್ತಿದ್ರೆ ನಿನ್ನೇ ನೋಡ್ದಂಗಾಯ್ತದೆ ಕನೋ ಅಣ್ತಮ್ಮ!’ ಯಂಟಪ್ಪಣ್ಣ ಹಕ್ಲಾಸ ಮಾಡಿತು.

‘ಕುರಿತೇಟಾಗೇಳಿದ್ರಿ ಯಂಟಪ್ಪಣ್ಣ. ವ್ಯವಸ್ಥೆ ನಮ್ಮನ್ನ ದಸರಾ ಆನೆ ಮಾಡಿ ಹಿಂದ್ಕೆ ಮುಂದ್ಕೆ ಗುನ್ನಂಪಟ್ಟೆ ಕಟ್ಟಿ ‘ನೋಡು ಹ್ಯಂಗದೆ!’ ಅಂತ ಮಾಲೀಸು ಮಾಡಿ ಅಂಬಾರಿ ಹೊರಿಸಿ ದಿಬ್ಬಣ ಹೊಂಡುಸ್ತದೆ! ಎಲ್ಲೂ ನಿಲ್ಲಂಗುಲ್ಲ, ಕೂರಂಗುಲ್ಲ ಸರ್ಕಾರ ತಿವೀತ್ಲೇ ಇರತದೆ. ತೆರಿಗೆ ಕೊಡೋದು ಜನರ ಕರ್ತವ್ಯ, ಸಾಧನೆ ಮಾತ್ರ ಸರ್ಕಾರದ್ದು ಅಂತ ತೋರಿಸೋ ಸ್ತಬ್ಧಚಿತ್ರಗಳು ಇರತವೆ. ರಾಜಕಾರಣಿಗಳು ಮಾಡ ಕ್ಯಾಮೆ ಬುಟ್ಟು ಊರೊಟ್ಟಿನ ದುಡ್ಡು ಎಪ್ಪೆಸ್ ಮಾಡೋ ಮಾಮಾಚಾರಿಗಳ ಜೊತೆ ಸೇರಿಕ್ಯಂದು ತರಂಥರ ವಾದ್ಯ ಊದಿಕ್ಯಂದು ನಮ್ಮ ಸುತ್ತ ವಾದ್ಯಗೋಷ್ಟಿ ಮಾಡ್ತಾ ಇರತರೆ. ಇಕ್ಕಡೆ ಸೋ-ಶೋ ಪಾಲುದಾರಿಕೆ ಕ್ಯಾಕೆ, ಅಕ್ಕಡೆ ಡಿಕೆಶಿ- ಕುಮಾರಣ್ಣ ಕುಶಾಲು, ಹುಲಿಯಾ-ಅರಗ ಸಲ್ಲಾಪ ನಡೀತಿರ್ತದೆ! ನಾವು ಇದೇ ಸ್ವರ್ಗ ಅಂದ್ಕಂಡು ಕಣ್ಮುಚ್ಕಂದಿರತೀವಿ! ಈತರಕೀತರ ದಸರಾ ಈಗ ಪ್ರಜಾಸದರ ಆಗೋಗ್ಯದೆ!’ ದಸರಾ ವಿವರಣೆ ಕೊಟ್ಟರು ತುರೇಮಣೆ.

ADVERTISEMENT

‘ಮೈಸೂರು ಮಾರಾಜರು ಅವುರ ಮನೆ ಒಡವೆ, ದುಡ್ಡು ಕೊಟ್ಟು ಕೆಆರೆಸ್ ಕಟ್ಟಿದರಂತೆ. ಈಗಿನವು ದಿಮ್ಮಲೆ ರಂಗ ಅಂತ ಸರ್ಕಾರದ ದುಡ್ಡು ಲಪಟಾಯಿಸಿ ಸ್ವಂತಮನೆ ಕಟ್ಟಿಗ್ಯಂತವೆ!’ ಯಂಟಪ್ಪಣ್ಣ ಎಕ್ಸ್‌ಪರ್ಟ್ ಕಾಮೆಂಟ್ ಕೊಟ್ಟಿತು.

‘ಅಣೈ, ಅಕ್ರಮ ಕಾಮಗಾರಿ ಬೇರು ಎಲ್ಲೆಲ್ಲೋಗ್ಯದೋ! ಸಿಗೇ ಬಿದ್ದಿರ ವಾಟ್ಸಪ್ ಬಿಲ್ಗಾರರಿಗೆ ಆದಾಯ ತೆರಿಗೆ ಒಳೇಟು ಕೊಟ್ಟು ಜಲ-ಮಲ ಬಂದ್ ಮಾಡ್ಯದಂತೆ! ಮೋದಿ ಚಿಗಪ್ಪ ಇದರಲ್ಲಿ ಕೈಕಟ್-ಬಾಯ್ಮುಚ್ ರಾಜಕೀಯ ಮಾಡದೇ ಅಪಾಪೋಲಿಗಳ ತೆಂಡೆ ಕಿತ್ತಾಕ್ಬೇಕು!’ ಅಚ್ಛೇ ದಿನ್ ಅಬ್ಬರದಲ್ಲಿ ನನ್ನ ಮಾತು ಯಾರಿಗೂ ಕೇಳಿಸಲಿಲ್ಲ.

ಸಾರಾಂಶ

‘ಆನೆ ನೋಡ್ತಿದ್ರೆ ನಿನ್ನೇ ನೋಡ್ದಂಗಾಯ್ತದೆ ಕನೋ ಅಣ್ತಮ್ಮ!’ ಯಂಟಪ್ಪಣ್ಣ ಹಕ್ಲಾಸ ಮಾಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.