ADVERTISEMENT

ನೀತಿ ರೂಪಿಸುವಲ್ಲಿ ‘ಐಸೆಕ್‌’ ಮಹತ್ವದ ಪಾತ್ರ: ಥಾವರಚಂದ್‌ ಗೆಹಲೋತ್‌

ಸಂಸ್ಥೆಗೆ ಸುವರ್ಣ ಮಹೋತ್ಸವದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 19:58 IST
Last Updated 19 ಜನವರಿ 2022, 19:58 IST
ರಾಜ್ಯಪಾಲ ಥಾವರಚಂದ್‌ ಗೆಹಲೋತ್‌
ರಾಜ್ಯಪಾಲ ಥಾವರಚಂದ್‌ ಗೆಹಲೋತ್‌   

ಬೆಂಗಳೂರು: ‘ರಾಜ್ಯ ಸರ್ಕಾರ ನೀತಿಗಳನ್ನು ರೂಪಿಸುವಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ (ಐಸೆಕ್) ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಬುಧವಾರ ನಡೆದ ಐಸೆಕ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಬಡತನವನ್ನು ಕಡಿಮೆ ಮಾಡಲು ಐಸೆಕ್‌ ನೀಡಿರುವ ಕೊಡುಗೆ ಅಪಾರ. ಕಳೆದ 50 ವರ್ಷಗಳಲ್ಲಿ ಸಂಸ್ಥೆಯು 934 ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಿರುವುದು ಶ್ಲಾಘನೀಯ’ ಎಂದರು.

ಸಂಸ್ಥೆ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ‘ಕೃಷಿ, ಶಿಕ್ಷಣ, ಆರ್ಥಿಕ ಬೆಳವಣಿಗೆ, ನಗರೀಕರಣ, ವಿಕೇಂದ್ರೀಕರಣ, ರಾಜ್ಯಶಾಸ್ತ್ರ ಮತ್ತು ಜನಸಂಖ್ಯೆ ವಿಷಯದ ಕುರಿತು ಮಹತ್ವದ ಸಂಶೋಧನಾ ಕಾರ್ಯಗಳನ್ನು ಸಂಸ್ಥೆ ಕೈಗೊಂಡಿದೆ. 237 ಪುಸ್ತಕಗಳು ಮತ್ತು ಸುಮಾರು ಎರಡು ಸಾವಿರ ಲೇಖನ
ಗಳನ್ನು ಸಂಸ್ಥೆಯ ಪ್ರಾಧ್ಯಾಪಕರು ಪ್ರಕಟಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಸಂಸ್ಥೆಯ ಅಧ್ಯಕ್ಷ ಪ್ರೊ ಸುಖದೇವ್‌ ತೋರಾಟ್‌ ಮಾತನಾಡಿ, ‘ಪ್ರೊ. ವಿಕೆಆರ್‌ವಿ ರಾವ್ ಅವರು ಐಸೆಕ್‌ ಸ್ಥಾಪಿಸಲು ಮೂಲ ಕಾರಣರು. ತಮ್ಮ ಮನೆಯಲ್ಲಿನ ಮೂರು ಕೊಠಡಿಗಳಲ್ಲಿ ಈ ಸಂಸ್ಥೆಯನ್ನು ಆರಂಭಿಸಿದ್ದರು. ಬಾಡಿಗೆ ಕಟ್ಟಡದಲ್ಲಿಯೂ ಕೆಲ ದಿನಗಳ ಕಾಲ ಸಂಸ್ಥೆ ನಡೆಯಿತು. ಬಳಿಕ, ಸುಂದರವಾದ ಸ್ಥಳದಲ್ಲಿ ಸಂಸ್ಥೆ ಆರಂಭವಾಯಿತು’ ಎಂದು ವಿವರಿಸಿದರು.

‘ಈ ಸಂಸ್ಥೆಯನ್ನು ರಾಜ್ಯ ಸಾರ್ವಜನಿಕ ಸಂಶೋಧನಾ ವಿಶ್ವವಿದ್ಯಾಲಯ ಅಥವಾ ಡೀಮ್ಡ್‌ ಸಾರ್ವಜನಿಕ ರಾಜ್ಯ ವಿಶ್ವವಿದ್ಯಾಲಯ ಅಥವಾ ಐಐಟಿ ಮಾದರಿಯಲ್ಲಿ ರಾಷ್ಟ್ರೀಯ ಮಹತ್ವದ ಸಂಸ್ಥೆಯನ್ನಾಗಿ ಘೋಷಿಸಬೇಕು’ ಎಂದು ಅವರು ಕೋರಿದರು.

 ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಮಾತನಾಡಿ, ‘ಐಸೆಕ್‌ ಸಂಸ್ಥೆಯ ಶೈಕ್ಷಣಿಕ ವಲಯದಲ್ಲಿ ಅತ್ಯು
ತ್ತಮ ಸಂಶೋಧನೆಗಳನ್ನು ಕೈಗೊಂಡಿದೆ’ ಎಂದು ಶ್ಲಾಘಿಸಿದರು. ಐಸೆಕ್‌ ನಿರ್ದೇಶಕ ಪ್ರೊ. ಡಿ. ರಾಜಶೇಖರ್‌ ಇದ್ದರು.

ಸಾರಾಂಶ

ಬೆಂಗಳೂರು: ‘ರಾಜ್ಯ ಸರ್ಕಾರ ನೀತಿಗಳನ್ನು ರೂಪಿಸುವಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ (ಐಸೆಕ್) ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಬುಧವಾರ ನಡೆದ ಐಸೆಕ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಬಡತನವನ್ನು ಕಡಿಮೆ ಮಾಡಲು ಐಸೆಕ್‌ ನೀಡಿರುವ ಕೊಡುಗೆ ಅಪಾರ. ಕಳೆದ 50 ವರ್ಷಗಳಲ್ಲಿ ಸಂಸ್ಥೆಯು 934 ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಿರುವುದು ಶ್ಲಾಘನೀಯ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.