ADVERTISEMENT

ಜಮ್ಮು– ಕಾಶ್ಮೀರ: ಉಗ್ರರ ನಾಲ್ವರು ಸಹಚರರ ಬಂಧನ

ವಿವಿಧೆಡೆ ಎನ್‌ಐಎ ದಾಳಿ

ನವದೆಹಲಿ (ಪಿಟಿಐ):
Published 13 ಅಕ್ಟೋಬರ್ 2021, 11:04 IST
Last Updated 13 ಅಕ್ಟೋಬರ್ 2021, 11:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ: ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಜಮ್ಮು ಮತ್ತು ಕಾಶ್ಮೀರದ 16 ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯದಲ್ಲಿ ಉಗ್ರರ ನಾಲ್ವರು ಸಹಚರರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ನವದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿ ನಡೆಸಲು ಭಯೋತ್ಪಾದಕರ ಗುಂಪುಗಳು ಸಂಚು ರೂಪಿಸಿದ್ದಕ್ಕೆ ಸಂಬಂಧಿಸಿ ಎನ್‌ಐಎ ಅ.10ರಂದು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿತ್ತು. ಇದರ ಬೆನ್ನಲ್ಲೇ ಈಗ ದಾಳಿ ನಡೆಸಲಾಗಿದೆ. 

ಶ್ರೀನಗರ, ಪುಲ್ವಾಮಾ ಮತ್ತು ಶೋಪಿಯಾನ್‌ ಜಿಲ್ಲೆಗಳಲ್ಲಿ ಮಂಗಳವಾರ ನಡೆದ ಶೋಧಕಾರ್ಯದ ವೇಳೆ, ಆರೋಪಿಗಳಾದ ವಸೀಮ್ ಅಹ್ಮದ್ ಸೋಫಿ, ತಾರಿಕ್ ಅಹ್ಮದ್ ದಾರ್, ಬಿಲಾಲ್ ಅಹ್ಮದ್ ಮೀರ್ ಅಲಿಯಾಸ್ ‘ಬಿಲಾಲ್ ಫಾಫು’ ಮತ್ತು ತಾರಿಕ್ ಅಹ್ಮದ್ ಬಫಂಡಾ ಎಂಬುವರನ್ನು ಬಂಧಿಸಲಾಗಿದೆ. ಬಂಧಿತರೆಲ್ಲ ಶ್ರೀನಗರ ನಿವಾಸಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಬಂಧಿತ ಆರೋಪಿಗಳು ಭಯೋತ್ಪಾದಕರ ಸಹಚರರಾಗಿದ್ದಾರೆ ಅಥವಾ ನಿಷೇಧಿತ ಭಯೋತ್ಪಾದಕ ಸಂಘಟನೆಗಳಿಗೆ ಸ್ಥಳೀಯವಾಗಿ ನೆರವು ನೀಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ವಿಧ್ವಂಸಕ ಕೃತ್ಯಗಳಿಗೆ ಬಳಸುವ ವಸ್ತುಗಳು–ಸಾಧನಗಳನ್ನು ಸಾಗಣೆ ಹಾಗೂ ಒದಗಿಸುವಲ್ಲಿ ಉಗ್ರರಿಗೆ ಈ ಬಂಧಿತರು ನೆರವಾಗುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಂಗಳವಾರವೂ ಸೇರಿದಂತೆ ಇತ್ತೀಚೆಗೆ ನಡೆಸಿದ ಶೋಧಕಾರ್ಯದಲ್ಲಿ ಕೆಲವೊಂದು ಎಲೆಕ್ಟ್ರಾನಿಕ್ ಉಪಕರಣಗಳು, ‘ಜಿಹಾದ್‌’ಗೆ ಸಂಬಂಧಿಸಿದ ದಾಖಲೆಗಳು ಮತ್ತು ಶಂಕಿತ ಹಣಕಾಸು ವ್ಯವಹಾರದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಸಾರಾಂಶ

ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದವರು ಬುಧವಾರ ಜಮ್ಮು ಮತ್ತು ಕಾಶ್ಮೀರದ 16 ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯದಲ್ಲಿ ನಾಲ್ವರು ಉಗ್ರರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.