ADVERTISEMENT

ಸಮೃದ್ಧ ಫಸಲಿಗೆ ಅನ್ನದಾತನ ಪ್ರಾರ್ಥನೆ; ಕುಟುಂಬದೊಂದಿಗೆ ಸಹಭೋಜನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 13:06 IST
Last Updated 10 ಜನವರಿ 2024, 13:06 IST
ಎಳ್ಳ ಅಮವಾಸ್ಯೆ ಅಂಗವಾಗಿ ಹೊರ್ತಿ ಸಮೀಪದ ಇಂಚಗೇರಿ ಗ್ರಾಮದ ಹೊಲದಲ್ಲಿ ಚೆರಗ ಚೆಲ್ಲಿ ಭೂಫಸಲಿಗೆ ಪೂಜಿಸಲಾಯಿತು (ಸಂಗ್ರಹ ಚಿತ್ರ)
ಎಳ್ಳ ಅಮವಾಸ್ಯೆ ಅಂಗವಾಗಿ ಹೊರ್ತಿ ಸಮೀಪದ ಇಂಚಗೇರಿ ಗ್ರಾಮದ ಹೊಲದಲ್ಲಿ ಚೆರಗ ಚೆಲ್ಲಿ ಭೂಫಸಲಿಗೆ ಪೂಜಿಸಲಾಯಿತು (ಸಂಗ್ರಹ ಚಿತ್ರ)   

ಕೆ.ಎಸ್.ಈಸರಗೊಂಡ

ಇಂಚಗೇರಿ:  ಭೂತಾಯಿ ಹಸಿರುಟ್ಟು ಹುಲುಸಾದ ಫಸಲು ತುಂಬಿಕೊಂಡು ಕಂಗೊಳಿಸುತ್ತಿರುವಾಗ ಆ ಫಸಲಿಗೆ ಪೂಜಿಸಿ ಆರಾಧಿಸುವ ರೈತ ಸಮೂಹ, ಪಂಚ ಪಾಂಡವರ ದ್ಯೋತಕವಾಗಿ ಜಮೀನಲ್ಲಿ 5 ಕಲ್ಲುಗಳನ್ನಿರಿಸಿ ಪೂಜೆ ಸಲ್ಲಿಸುತ್ತಾರೆ. ಇದನ್ನೇ ಭೂಮಿ ಪೂಜೆ, ಎಳ್ಳ ಅಮವಾಸ್ಯೆ ಎನ್ನಲಾಗುತ್ತದೆ.

ಹೊಲದ ನಾಲ್ಕು ಸುತ್ತ ಚೆರಗ ಚೆಲ್ಲುವಾಗ ಮುಂದೆ ಒಬ್ಬರು ನೀರನ್ನು ಸಿಂಪಡಿಸಿ ಹುಲ್ಲುಲ್ಲಿಗೂ ಅಂತ ಕೂಗಿದರೆ, ಹಿಂದಿನಿಂದ ಇಬ್ರು ಸಲಾಂಭ್ರಿಗೋ (ಸಜ್ಜಿ ರೊಟ್ಟಿ ಚೌಳಿಕಾಯಿ ಚಾಂಗ ಬಲೋ)ಎಂದು ಹೊಲದಲ್ಲೆಲ್ಲ ಚೆರಗ ಚೆಲ್ಲುತ್ತಾರೆ.

ADVERTISEMENT

ಉತ್ತರ ಕರ್ನಾಟಕದ ಸುತ್ತಲಿನ ಹಲವು ಗ್ರಾಮಗಳಲ್ಲಿ ಎಳ್ಳ ಅಮವಾಸ್ಯೆಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಾರೆ.ರೈತರು ಖುಷಿಯಿಂದಲೇ ಭೂತಾಯಿಗೆ ಪೂಜೆ ಸಲ್ಲಿಸುತ್ತಾರೆ.

ರೈತರ ಶಕ್ತಿಯಾಗಿರುವ ಎತ್ತುಗಳನ್ನು ಮೈತೊಳೆದು ಸಿಂಗರಿಸಿ, ಚಕ್ಕಡಿ ಕಟ್ಟಿಕೊಂಡು ಕುಟುಂಬ ಸದಸ್ಯರ ಜೊತೆಗೆ ತಮ್ಮ ಕೃಷಿ ಭೂಮಿಗೆ ತೆರಳಿಬೆಳೆದು ನಿಂತಿರುವ ಫಸಲಿಗೆ ಪೂಜೆ ಸಲ್ಲಿಸುತ್ತಾರೆ.

ರೈತ ಸಮೂಹ ಹೊಲದಲ್ಲಿಯೇ ಸಿಗುವ ಗುಂಡು ಕಲ್ಲುಗಳಿಂದ ಪಾಂಡವರ ಮೂರ್ತಿ ನಿರ್ಮಿಸಿ ಅವುಗಳಿಗೂ ಪೂಜೆ ಸಲ್ಲಿಸಿ, ಕುಟುಂಬದ ಯಜಮಾನ ಫಸಲಿಗೆ ಅರ್ಪಿಸಿರುವ ಎಡೆ (ಊಟ) ಸೇವಿಸುವ ಪದ್ಧತಿಯಿದೆ. ಎಡೆ ಸ್ವೀಕರಿಸುವ ಸಂದರ್ಭದಲ್ಲಿ ಯಾರೊಂದಿಗೂ ಮಾತನಾಡದೇ ಶ್ರದ್ಧಾ , ಭಕ್ತಿಯಿಂದ ಪ್ರಸಾದ ಸ್ವೀಕರಿಸಿದರೆ ಮುಂದಿನ ವರ್ಷದವರೆಗೆ ತೊಂದರೆ ಇಲ್ಲದೆ ಫಸಲು ಕೈಹಿಡಿಯಲಿದೆ ಎನ್ನುವ ನಂಬಿಕೆಯೂ ಇದೆ.

ಹೊಲದ ಸುತ್ತಲೂ ಚೆರಗ ಚೆಲ್ಲುವುದರಿಂದ ಫಸಲು ಸಮೃದ್ಧವಾಗಲಿದೆ ಎನ್ನುವ ನಂಬಿಕೆಯ ಜೊತೆ  ಹಕ್ಕಿ ಪಕ್ಷಿಗಳು ಅವನ್ನು ತಿನ್ನಲು ಬಂದು ಫಸಲಿಗೆ ಮುತ್ತಿರುವ ಕ್ರಿಮಿಕೀಟಗಳನ್ನು ತಿನ್ನುತ್ತವೆ ಎಂಬ ನಂಬಿಕೆಯೂ ಇದೆ.

ಎಳ್ಳ ಅಮವಾಸ್ಯೆಯ ಸಡಗರಕ್ಕಾಗಿಯೇ ಈ ಭಾಗದಲ್ಲಿ ಹತ್ತಾರು ವಿವಿಧ ಬಗೆಯ ಹಬ್ಬದಡುಗೆ  ಮಾಡಲಾಗುತ್ತದೆ. ಸಜ್ಜೆ ಕಡುಬು, ಕರ್ಚಿಕಾಯಿ, ಹುರಕ್ಕಿ ಹೋಳಿಗೆ, ಎಣ್ಣೆ ಹೋಳಿಗೆ, ಸಜ್ಜೆ ಮತ್ತು ಜೋಳದ ರೊಟ್ಟಿ, ಬದನೆ ಕಾಯಿ ಎಣಗಾಯಿ ಪಲ್ಯೆ, ಮಡಕಿಕಾಳು, ಹೆಸರು ಪಲ್ಯೆ, ವಿಧ ವಿಧದ ಬುತ್ತಿ ಹೀಗೆ ಹಲವು ಪದಾರ್ಥಗಳನ್ನು ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜತೆಗೂಡಿ ಸಹಭೋಜನ ಮಾಡುತ್ತಾರೆ.

ಮನೆಗೆ ಮರಳುವ ಸಂದರ್ಭದಲ್ಲಿ ಸ್ವಲ್ಪ ಫಸಲು ಕೊಯ್ದು ತಂದು ಪೂಜೆ ಸಲ್ಲಿಸಲಾಗುವುದು. ಮುಂದೆ ಫಸಲಿನ ರಾಶಿಯಲ್ಲಿ ಅದನ್ನು ಇಟ್ಟರೆ ಮತ್ತಷ್ಟು ಸಮೃದ್ಧವಾಗಲಿದೆ ಎನ್ನುವ ಭಾವನೆ ಇದೆ.

Highlights - ಜಮೀನಿಲ್ಲಿ ಪಾಂಡವರಿಗೆ ಪೂಜೆ ಉತ್ತರ ಕರ್ನಾಟಕದ ಹಲವು ಗ್ರಾಮಗಳಲ್ಲಿ ಆಚರಣೆ ಹೊಲದಲ್ಲಿ ಚೆರಗ ಚೆಲ್ಲುವ ರೈತರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.