ADVERTISEMENT

ಯಲ್ಲಮ್ಮ ದೇವಿ ಪಲ್ಲಕ್ಕಿ ಉತ್ಸವ ಸರಳ ಆಚರಣೆ: ಉಮಾಕಾಂತ ಹಳ್ಳೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 15:23 IST
Last Updated 16 ಅಕ್ಟೋಬರ್ 2021, 15:23 IST
ಚಿತ್ತಾಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ನಾಗಾವಿ ಯಲ್ಲಮ್ಮ ದೇವಿ ಜಾತ್ರೆ, ಪಲ್ಲಕ್ಕಿ ಉತ್ಸವ ಆಚರಣೆ ಕುರಿತು ಶನಿವಾರ ಪಟ್ಟಣದ ಮುಖಂಡರ ಪೂರ್ವಸಿದ್ಧತಾ ಸಭೆ ನಡೆಸಿದರು. ಮುಖಂಡ ರತ್ನಾಕರ್ ನಾಯಕ, ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ, ಪಿಎಸ್ಐ ಮಂಜುನಾಥರೆಡ್ಡಿ ಇದ್ದರು.
ಚಿತ್ತಾಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ನಾಗಾವಿ ಯಲ್ಲಮ್ಮ ದೇವಿ ಜಾತ್ರೆ, ಪಲ್ಲಕ್ಕಿ ಉತ್ಸವ ಆಚರಣೆ ಕುರಿತು ಶನಿವಾರ ಪಟ್ಟಣದ ಮುಖಂಡರ ಪೂರ್ವಸಿದ್ಧತಾ ಸಭೆ ನಡೆಸಿದರು. ಮುಖಂಡ ರತ್ನಾಕರ್ ನಾಯಕ, ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ, ಪಿಎಸ್ಐ ಮಂಜುನಾಥರೆಡ್ಡಿ ಇದ್ದರು.   

ಚಿತ್ತಾಪುರ: ಅಕ್ಟೋಬರ್ 20ರಂದು ಸೀಗಿ ಹುಣ್ಣಿಮೆ ದಿನ ಕೋವಿಡ್ ನಿಯಮಗಳ ಪ್ರಕಾರ ನಾಗಾವಿ ಯಲ್ಲಮ್ಮ ದೇವಿಯ ಜಾತ್ರೆ ಮತ್ತು ಪಲ್ಲಕ್ಕಿ ಉತ್ಸವವು ಪೂಜೆ ಮತ್ತು ಸಂಪ್ರದಾಯಕ್ಕೆ ಸೀಮಿತಗೊಳಿಸಿ ಆಡಳಿತದಿಂದ ಅತ್ಯಂತ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ತಿಳಿಸಿದರು.

ಸ್ಥಳೀಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಾಗಾವಿ ಯಲ್ಲಮ್ಮ ದೇವಿ ಜಾತ್ರೆ ಮತ್ತು ಪಲ್ಲಕ್ಕಿ ಉತ್ಸವದ ನಿಮಿತ್ತ ಜನರಿಗೆ ಮಾಹಿತಿ ನೀಡಲು ಮತ್ತು ಜನರ ಅಭಿಪ್ರಾಯ ಸಂಗ್ರಹಿಸಲು ಕರೆದಿದ್ದ ಪಟ್ಟಣದ ಮುಖಂಡರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ನಿಯಮಗಳು ಇನ್ನೂ ಜಾರಿಯಲ್ಲಿದೆ. ಜಾತ್ರೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಸ್ಪಷ್ಟ ಆದೇಶ ಬಂದಿಲ್ಲ. ಈಗಿರುವ ನಿಯಮಗಳ ಪ್ರಕಾರ ಅತ್ಯಂತ ಕಡಿಮೆ ಜನರು ಇರುವಂತೆ ಎಚ್ಚರಿಕೆ ವಹಿಸಿ ಪಲ್ಲಕ್ಕಿ ಉತ್ಸವದ ಸಂಪ್ರದಾಯ ನೆರವೇರಿಸಲಾಗುವುದು. ಜನರು ಆಡಳಿತಕ್ಕೆ ಸಹಕಾರ ನೀಡಬೇಕು. ಅಂದು ದೇವಸ್ಥಾನದಲ್ಲಿ ದೇವಿಯ ದಶರ್ನಕ್ಕೆ ಅವಕಾಶ ನೀಡಲಾಗುತ್ತದೆ. ಗರ್ಭಗೃಹದಲ್ಲಿ ನೈವೇದ್ಯ, ಕಾಯಿಕರ್ಪೂರ ಅರ್ಪಣೆಗೆ ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದರು.

ADVERTISEMENT

ಬೇರೆ ಜಿಲ್ಲೆ ಹಾಗೂ ಹೊರ ರಾಜ್ಯದ ಭಕ್ತರಿಗೆ ಅವಕಾಶ ಇರುವುದಿಲ್ಲ. ದೇವಿಯ ದರ್ಶನಕ್ಕೆ ಬರುವವರು ಕೋವಿಡ್ ಲಸಿಕೆ ಪಡೆದಿರಬೇಕು ಅಥವಾ ಲಸಿಕೆ ಪಡೆದು ದರ್ಶನಕ್ಕೆ ತೆರಳಬೇಕು. ಸರಾಫ್ ಲಚ್ಚಪ್ಪ ನಾಯಕ ಅವರ ಮನೆಯಲ್ಲಿ ಮಧ್ಯಾಹ್ನ 2.30ಕ್ಕೆ ಪಲ್ಲಕ್ಕಿ ಪೂಜೆ ನರವೇರಿಸಿ ತೆರೆದ ವಾಹನದ ಮೂಲಕ ಪಲ್ಲಕ್ಕಿ ದೇವಸ್ಥಾನಕ್ಕೆ ತರಲಾಗುವುದು. ಪಲ್ಲಕ್ಕಿ ಸಂಪ್ರದಾಯ ನೆರವೇರಿಸುವ ಜನರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದಿರಬೇಕು ಎಂದರು.

ಮುಖಂಡ ರತ್ನಾಕರ ನಾಯಕ, ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ, ಪಿಎಸ್ಐ ಮಂಜುನಾಥರೆಡ್ಡಿ, ಹಿರಿಯ ಮುಖಂಡ ಭೀಮಣ್ಣ ಸಾಲಿ, ಈರಪ್ಪ ಭೋವಿ, ಭೀಮು ಕರದಾಳ, ನರಹರಿ ಕುಲಕರ್ಣಿ, ಸಾಬಣ್ಣ ದೊಡ್ಡಮನಿ, ಗೋವಿಂದ ನಾಯಕ, ವಿಷ್ಣು ಜಿತುರೆ ಅವರು ಮಾತನಾಡಿದರು.

ಶಿರಸ್ತೆದಾರ್ ಅಶ್ವಥನಾರಾಯಣ ಅವರು ಕೋವಿಡ್ ನಿಯಮಗಳ ಕುರಿತು ಮಾಹಿತಿ ನೀಡಿದರು. ಮುಖಂಡರಾದ ಮಹ್ಮದ್ ರಸೂಲ್ ಮುಸ್ತಫಾ, ನಾಗರಾಜ ರೇಷ್ಮಿ, ಕಣ್ವ ನಾಯಕ, ವಿನೋಧ ಗುತ್ತೆದಾರ್, ನಾಗರಾಜ ಭಂಕಲಗಾ, ಭೀಮಣ್ಣ ಹೋತಿನಮಡಿ, ಸುರೇಶ ಅಳ್ಳೊಳ್ಳಿ, ಮಲ್ಲಿಕಾರ್ಜುನ ಕಾಳಗಿ, ಅಶ್ವಥ ರಾಠೋಡ್, ಜಗದೀಶ ಸಾಗರ, ಸಿದ್ರಾಮಯ್ಯ ಗೊಂಬಿಮಠ ಅನೇಕರು ಇದ್ದರು.

ಸಾರಾಂಶ

ನಾಗಾವಿ ಯಲ್ಲಮ್ಮ ದೇವಿ ಜಾತ್ರೆ, ಪಲ್ಲಕ್ಕಿ ಉತ್ಸವ ಸಿದ್ಧತಾ ಸಭೆಯ ಸುದ್ಧಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.