ADVERTISEMENT

₹462 ಕೋಟಿ ಬಾಕಿ: ಹೆಸ್ಕಾಂಗೆ ಸಂಕಷ್ಟ

ನಷ್ಟ, ಬಾಕಿ ಸರಿದೂಗಿಸಿಕೊಳ್ಳಲು ವಿದ್ಯುತ್‌ ದರ ಏರಿಕೆಗೆ ಮನವಿ

ಬಸವರಾಜ ಹವಾಲ್ದಾರ
Published 15 ಜನವರಿ 2022, 19:16 IST
Last Updated 15 ಜನವರಿ 2022, 19:16 IST
ಸಾಂದರ್ಬಿಕ ಚಿತ್ರ  
ಸಾಂದರ್ಬಿಕ ಚಿತ್ರ     

ಹುಬ್ಬಳ್ಳಿ: ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳು, ಸಣ್ಣ ನೀರಾವರಿ ಇಲಾಖೆ, ಕರ್ನಾಟಕ ನೀರಾವರಿ ನಿಗಮ ಸೇರಿದಂತೆ ಹಲವು ಇಲಾಖೆಗಳು ₹462 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವುದರಿಂದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯು (ಹೆಸ್ಕಾಂ) ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಹೊರೆ ಸರಿದೂಗಿಸಿಕೊಳ್ಳಲು ಕೋವಿಡ್‌ ಸ್ಥಿತಿಯಲ್ಲಿಯೂ ವಿದ್ಯುತ್‌ ದರ ಏರಿಕೆಗೆ ಹೆಸ್ಕಾಂ ಮುಂದಾಗಿದ್ದು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಿದೆ. ಸರ್ಕಾರಿ ಇಲಾಖೆಗಳ ಬಾಕಿ ಪಾವತಿ, ವಿದ್ಯುತ್‌ ಸರಬರಾಜಿನಲ್ಲಿನ ನಷ್ಟ ಮುಂತಾದವುಗಳ ಹೊರೆಯನ್ನು ಗ್ರಾಹಕರು ಹೊರಬೇಕಾಗಿದೆ.

‘ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ, ಗ್ರಾಮ ಪಂಚಾಯ್ತಿಗಳಿಗೆ ಬಾಕಿ ಹಣ ಪಾವತಿಗೆ ಸೂಚಿಸಿ ನೋಟಿಸ್ ನೀಡಲಾಗುತ್ತಿದೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ₹46 ಕೋಟಿ, ಬೆಳಗಾವಿ ಮಹಾನಗರ ಪಾಲಿಕೆ ₹49.10 ಕೋಟಿ ಬಾಕಿ ಉಳಿಸಿಕೊಂಡಿವೆ’ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ.ಭಾರತಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕುಡಿಯುವ ನೀರು ಹಾಗೂ ಬೀದಿ ದೀಪಗಳಿಗೆ ಬಳಸುವ ವಿದ್ಯುತ್‌ ಬಿಲ್‌ ಬಾಕಿ ಪ್ರತಿ ವರ್ಷ ಹೆಚ್ಚುತ್ತಿದೆ. ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳು ₹129 ಕೋಟಿ ಹಾಗೂ ಗ್ರಾಮ ಪಂಚಾಯ್ತಿಗಳು ₹300 ಕೋಟಿ ಬಾಕಿ ಉಳಿಸಿಕೊಂಡಿವೆ.

ಉಳಿದಂತೆ, ಸಣ್ಣ ನೀರಾವರಿ ಇಲಾಖೆ ₹17.02 ಕೋಟಿ, ಕರ್ನಾಟಕ ನೀರಾವರಿ ನಿಗಮ ₹32.66 ಕೋಟಿ, ಕೃಷ್ಣಾ ಭಾಗ್ಯ ಜಲನಿಗಮ ₹7 ಕೋಟಿ ಹಾಗೂ ಕೆಎನ್‌ಎನ್‌ಎಲ್‌ (ತುಂಗಾ ಮೇಲ್ದಂಡೆ ಯೋಜನೆ) ₹2.31 ಕೋಟಿ ವಿದ್ಯುತ್‌ ಬಿಲ್‌ ಪಾವತಿಸಬೇಕಿದೆ.

ಕರ್ನಾಟಕ ನೀರಾವರಿ ನಿಗಮ ಸೇರಿ ಹಲವು ಇಲಾಖೆಗಳಿಗೆ ನೋಟಿಸ್ ಜಾರಿಯಾಗಿದೆ. ಏಳು ದಿನಗಳಲ್ಲಿ ಬಾಕಿ ಪಾವತಿಸದಿದ್ದರೆ, ವಿದ್ಯುತ್‌ ಕಡಿತ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದರು.

ಸಾರಾಂಶ

ಹುಬ್ಬಳ್ಳಿ: ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳು, ಸಣ್ಣ ನೀರಾವರಿ ಇಲಾಖೆ, ಕರ್ನಾಟಕ ನೀರಾವರಿ ನಿಗಮ ಸೇರಿದಂತೆ ಹಲವು ಇಲಾಖೆಗಳು ₹462 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವುದರಿಂದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯು (ಹೆಸ್ಕಾಂ) ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೊರೆ ಸರಿದೂಗಿಸಿಕೊಳ್ಳಲು ಕೋವಿಡ್‌ ಸ್ಥಿತಿ ಯಲ್ಲಿಯೂ ವಿದ್ಯುತ್‌ ದರ ಏರಿಕೆಗೆ ಹೆಸ್ಕಾಂ ಮುಂದಾಗಿದ್ದು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಿದೆ. ಸರ್ಕಾರಿ ಇಲಾಖೆಗಳ ಬಾಕಿ ಪಾವತಿ, ವಿದ್ಯುತ್‌ ಸರಬರಾಜಿನಲ್ಲಿನ ನಷ್ಟ ಮುಂತಾದವುಗಳ ಹೊರೆಯನ್ನು ಗ್ರಾಹಕರು ಹೊರಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.