ADVERTISEMENT

ದೋಬಿಘಾಟ್ ಒತ್ತುವರಿ ತೆರವಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 5:19 IST
Last Updated 18 ಜನವರಿ 2022, 5:19 IST
ಬಾಗೇಪಲ್ಲಿ ತಾಲ್ಲೂಕು ಕಚೇರಿಯಲ್ಲಿ ಮಡಿವಾಳ ಸಮುದಾಯದ ರಾಜ್ಯ ಉಪಾಧ್ಯಕ್ಷ ಎಚ್.ವಿ. ನಾಗರಾಜ್ ಮತ್ತು ಜಿಲ್ಲಾ ಉಪಾಧ್ಯಕ್ಷ ಬಿ.ಎಸ್. ಸುರೇಶ್ ಅವರು ತಹಶೀಲ್ದಾರ್ ವೈ. ರವಿಗೆ ಮನವಿ ಪತ್ರ ಸಲ್ಲಿಸಿದರು 
ಬಾಗೇಪಲ್ಲಿ ತಾಲ್ಲೂಕು ಕಚೇರಿಯಲ್ಲಿ ಮಡಿವಾಳ ಸಮುದಾಯದ ರಾಜ್ಯ ಉಪಾಧ್ಯಕ್ಷ ಎಚ್.ವಿ. ನಾಗರಾಜ್ ಮತ್ತು ಜಿಲ್ಲಾ ಉಪಾಧ್ಯಕ್ಷ ಬಿ.ಎಸ್. ಸುರೇಶ್ ಅವರು ತಹಶೀಲ್ದಾರ್ ವೈ. ರವಿಗೆ ಮನವಿ ಪತ್ರ ಸಲ್ಲಿಸಿದರು    

ಬಾಗೇಪಲ್ಲಿ: ಪಟ್ಟಣದ ಒಂದನೇ ವಾರ್ಡ್‍ನ ಶಿಂಗಯ್ಯನಾಯ್ಕನದಿನ್ನೆ ಗ್ರಾಮದ ಸರ್ವೆ ನಂ. 23ರಲ್ಲಿ ದೋಬಿಘಾಟ್‌ಗೆ 22 ಗುಂಟೆ ಜಮೀನು ಜಿಲ್ಲಾಡಳಿತದಿಂದ ಮಂಜೂರಾಗಿದ್ದು, ಇದನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಕೂಡಲೇ ಸರ್ವೆ ನಡೆಸಿ ತೆರವುಗೊಳಿಸಬೇಕು ಎಂದು ಮಡಿವಾಳ ಸಮುದಾಯದ ಮುಖಂಡರು ಸೋಮವಾರ ಪಟ್ಟಣದಲ್ಲಿ ತಹಶೀಲ್ದಾರ್ ವೈ. ರವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯ ಮಡಿವಾಳ ಸಂಘದ ಉಪಾಧ್ಯಕ್ಷ ಎಚ್.ವಿ. ನಾಗರಾಜ್ ಮಾತನಾಡಿ, 22 ಗುಂಟೆ ಜಮೀನನ್ನು ಜಿಲ್ಲಾಧಿಕಾರಿ ಅವರು 2020ರ ಡಿ. 12ರಂದು ಕಲ್ಲುಗುಟ್ಟೆ ಎಂಬುದಾಗಿ ವರ್ಗೀಕರಿಸಿದ್ದಾರೆ. ಈ ಜಮೀನನ್ನು ದೋಬಿಘಾಟ್‌ಗೆ ಎಂದು ನಕ್ಷೆ ತಯಾರಿಸಲಾಗಿದೆ. ಕರ್ನಾಟಕ ಭೂಕಂದಾಯ ಅಧಿನಿಯಮಗಳು 1964ರ ಕಲಂ 71ರಡಿ ದೋಬಿಘಾಟ್ ನಿರ್ಮಾಣಕ್ಕಾಗಿ ಕಾಯ್ದಿರಿಸಲಾಗಿದೆ. ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗೆ ವರ್ಗಾಯಿಸಿ ಆದೇಶಿಸಿದ್ದಾರೆ ಎಂದು ತಿಳಿಸಿದರು.

ಜಮೀನಿನಲ್ಲಿ ದೋಬಿಘಾಟ್, ಮಡಿವಾಳ ಮಾಚಿದೇವರ ವಿಗ್ರಹ ಪ್ರತಿಷ್ಠಾಪನೆ, ಸಮುದಾಯ ಭವನ ನಿರ್ಮಾಣ ಮತ್ತು  ತಡೆಗೋಡೆ ಕಟ್ಟಲು ಆಗಿಲ್ಲ. ಇದೀಗ ದೋಬಿಘಾಟ್‌ಗೆ ಕಾಯ್ದಿರಿಸಿರುವ ಜಮೀನಿನಲ್ಲಿ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಮನೆಗಳನ್ನು ನಿರ್ಮಿಸಲು ಮುಂದಾಗಿದ್ದಾರೆ ಎಂದು ದೂರಿದರು.

ADVERTISEMENT

‘40 ವರ್ಷಗಳಿಂದ ಈ ಜಮೀನಿನಲ್ಲಿ ನಾವು ಅನುಭವದಲ್ಲಿ ಇದ್ದೇವೆ. ಇದೀಗ ದೋಬಿಘಾಟ್‌ಗೆ ಕಾಯ್ದಿರಿಸಿರುವುದು ಖಂಡನೀಯ. ದೋಬಿಘಾಟ್ ನಿರ್ಮಾಣಕ್ಕೆ ಬೇರೆಡೆ ಜಮೀನು ನೀಡಲಿ. ನಮ್ಮ ಜಮೀನು ನೀಡಬಾರದು’ ಎಂದು ವಾಲ್ಮೀಕಿನಗರದ ನಿವಾಸಿ ಗಡ್ಡಂನರಸಪ್ಪ ಪ್ರತಿಕ್ರಿಯಿಸಿದರು.

ಮಡಿವಾಳ ಸಮುದಾಯದ ಮುಖಂಡರು ಸೋಮವಾರ ಶಿಂಗಯ್ಯನಾಯ್ಕನದಿನ್ನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಮಡಿವಾಳ ಸಂಘದ ಉಪಾಧ್ಯಕ್ಷ ಬಿ.ಎಸ್. ರಮೇಶ್, ಮುಖಂಡರಾದ ರವಣಪ್ಪ, ಗಿರಿಬಾಬು, ರಾಮಚಂದ್ರಪ್ಪ, ಮಲ್ಲಪ್ಪ, ಶ್ರೀನಿವಾಸ್, ಅಶೋಕ್, ಚಂದ್ರಪ್ಪ, ರಾಮು, ಸೀನ ಇದ್ದರು.

ಸಾರಾಂಶ

ಪಟ್ಟಣದ ಒಂದನೇ ವಾರ್ಡ್‍ನ ಶಿಂಗಯ್ಯನಾಯ್ಕನದಿನ್ನೆ ಗ್ರಾಮದ ಸರ್ವೆ ನಂ. 23ರಲ್ಲಿ ದೋಬಿಘಾಟ್‌ಗೆ 22 ಗುಂಟೆ ಜಮೀನು ಜಿಲ್ಲಾಡಳಿತದಿಂದ ಮಂಜೂರಾಗಿದ್ದು, ಇದನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಕೂಡಲೇ ಸರ್ವೆ ನಡೆಸಿ ತೆರವುಗೊಳಿಸಬೇಕು ಎಂದು ಮಡಿವಾಳ ಸಮುದಾಯದ ಮುಖಂಡರು ಸೋಮವಾರ ಪಟ್ಟಣದಲ್ಲಿ ತಹಶೀಲ್ದಾರ್ ವೈ. ರವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.