ADVERTISEMENT

ಎಕ್ಸ್‌ಪ್ರೆಸ್‌ ವೇ: ಸರ್ವೀಸ್ ರಸ್ತೆಗೆ ಆದ್ಯತೆ ಇಲ್ಲ

ಎಕ್ಸ್‌ಪ್ರೆಸ್‌ ವೇ: ಸರ್ವೀಸ್ ರಸ್ತೆಗೆ ಆದ್ಯತೆ ಇಲ್ಲ

Nagaraja B
Published 18 ಮಾರ್ಚ್ 2023, 10:41 IST
Last Updated 18 ಮಾರ್ಚ್ 2023, 10:41 IST
ಎಕ್ಸ್‌ಪ್ರೆಸ್‌ ವೇನಲ್ಲಿ ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರದ ಬಳಿ ಹೆದ್ದಾರಿ ಪೂರ್ಣಗೊಂಡಿಲ್ಲ. ಸರ್ವಿಸ್ ರಸ್ತೆಯಲ್ಲಿ ಮೋರಿ ನೀರು ಹರಿಯುತ್ತಿದೆ / ಪ್ರಜಾವಾಣಿ ಚಿತ್ರ: ಎಂ.ಮಹೇಶ
ಎಕ್ಸ್‌ಪ್ರೆಸ್‌ ವೇನಲ್ಲಿ ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರದ ಬಳಿ ಹೆದ್ದಾರಿ ಪೂರ್ಣಗೊಂಡಿಲ್ಲ. ಸರ್ವಿಸ್ ರಸ್ತೆಯಲ್ಲಿ ಮೋರಿ ನೀರು ಹರಿಯುತ್ತಿದೆ / ಪ್ರಜಾವಾಣಿ ಚಿತ್ರ: ಎಂ.ಮಹೇಶ   

ಮೈಸೂರು/ಮಂಡ್ಯ/ರಾಮನಗರ: ಬೆಂಗಳೂರು-ಮೈಸೂರು‌ ನಡುವಿನ ಆರು ಪಥದ ಎಕ್ಸ್‌ಪ್ರೆಸ್‌ ವೇಗೆ ಸಮನಾಂತರವಾಗಿ ಅಷ್ಟೇ ಉದ್ದದ ಸರ್ವೀಸ್ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ, ಆರು ಪಥಕ್ಕೆ ಕೊಟ್ಟಷ್ಟು ಆದ್ಯತೆ ನೀಡಿಲ್ಲ. ಅಲ್ಲಲ್ಲಿ ನಿರ್ಮಾಣ ನಡೆದಿರುವುದರಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ.

ಸರ್ವೀಸ್‌ ರಸ್ತೆ ಬದಿಯಲ್ಲಿರುವ ಚರಂಡಿ ರಸ್ತೆಗಿಂತ ಎತ್ತರದಲ್ಲಿದ್ದು, ಮಳೆ ನೀರು ಕೆಳಸೇತುವೆಯತ್ತ ನುಗ್ಗುವ ಆತಂಕ ಗ್ರಾಮಸ್ಥರಲ್ಲಿದೆ. ‘ಇದು ದಶಪಥ ಹೆದ್ದಾರಿಯಲ್ಲ, ಆರೇ ಪಥದ ರಸ್ತೆ. ಸರ್ವೀಸ್ ರಸ್ತೆ ಲೆಕ್ಕಕ್ಕಿಲ್ಲ’ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮಾತಿಗೆ ತಕ್ಕಂತೆಯೇ ಕಾಮಗಾರಿಗಳು ನಡೆದಿವೆ. ಬೆಂಗಳೂರು ಕಡೆಯಿಂದ ಬರುವವರು ಕಣಮಿಣಕಿ ಟೋಲ್ ದಾಟಿ ಮುಂದೆ ಬಂದರೆ ಸರ್ವೀಸ್ ರಸ್ತೆಯೇ ಇಲ್ಲ. ಅದಕ್ಕೆ ಭೂವಿವಾದ ಕಾರಣ. ಹೀಗಾಗಿ‌ ಮತ್ತೆ ಈ ರಸ್ತೆ ಎಕ್ಸ್‌ಪ್ರೆಸ್‌ ವೇ ಜೊತೆ ಕೂಡಿಕೊಳ್ಳುತ್ತದೆ. ಟೋಲ್ ಕಟ್ಟಿದವರು, ಕಟ್ಟದವ
ರೆಲ್ಲರೂ ಒಂದೇ ರಸ್ತೆಯಲ್ಲಿ ಪ್ರಯಾಣಿಸುತ್ತಾರೆ. ರಾಮನಗರ ಜಿಲ್ಲೆಯ ಹೆಜ್ಜಾಲ, ಶೇಷಗಿರಿಹಳ್ಳಿ, ತಿಟ್ಟಮಾರನಹಳ್ಳಿ
ಯಲ್ಲಿ ಸರ್ವೀಸ್ ರಸ್ತೆ ಕಾಮಗಾರಿಗಳು ಅಪೂರ್ಣವಾಗಿವೆ.

ಸರ್ವೀಸ್ ರಸ್ತೆಗಳಲ್ಲಿ ಬಸ್ ತಂಗುದಾಣ, ಶಾಲೆಗಳಿರುವೆಡೆ ಸ್ಕೈವಾಕ್ ಸೌಕರ್ಯವಿಲ್ಲ. ಬೈಪಾಸ್ ರಸ್ತೆಗಳಲ್ಲಿ‌ ಶೌಚಾಲಯವಿಲ್ಲ. ಇಡೀ ಹೆದ್ದಾರಿಗೆ ಎರಡು ಆಂಬುಲೆನ್ಸ್ ಸೇವೆ ಒದಗಿಸಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ. ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು, ಹೈವೆ ಗಸ್ತು ಆರಂಭವಾಗಿಲ್ಲ. ಅಪಘಾತ ಕ್ಕೀಡಾದರೆ ತುರ್ತು ಸ್ಪಂದನೆಗೆ ಬಹಳ ಸಮಯ ಕಾಯಬೇಕು!

ADVERTISEMENT

ಚರಂಡಿ ನಿರ್ಮಾಣ ಅವೈಜ್ಞಾನಿಕ ವಾಗಿದ್ದು ನೀರು ರಸ್ತೆಯಲ್ಲೇ ಹರಿದು ಕೆಳಸೇತುವೆಯಲ್ಲಿ ನಿಲ್ಲುವ ಅಪಾಯವಿದೆ. ‘ರಸ್ತೆಗೂ ಮೊದಲೇ ಚರಂಡಿ ನಿರ್ಮಿಸಿದ್ದು ಅವಾಂತರಕ್ಕೆ ಕಾರಣ’ ಎನ್ನುತ್ತಾರೆ ಸ್ಥಳೀಯರು.

ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಕೆಳಸೇತುವೆಗಿಂತ ರಸ್ತೆಯೇ ಎತ್ತರದ
ಲ್ಲಿದ್ದು, ರಸ್ತೆಗಿಂತಲೂ ಚರಂಡಿ ಎತ್ತರದಲ್ಲಿದೆ. ನೀರು ಎಲ್ಲಿ ಹರಿಯಬೇಕೆಂಬ ಪ್ರಶ್ನೆಗೆ ಉತ್ತರವಿಲ್ಲ.

‘ಬೂದನೂರು ಬಳಿ ಎರಡು ಕೆಳ ಸೇತುವೆಗಳು ಸರ್ವೀಸ್‌ ರಸ್ತೆಗಿಂತಲೂ ಕೆಳಮಟ್ಟದಲ್ಲಿವೆ. ಪಕ್ಕದ ಚರಂಡಿ ರಸ್ತೆಗಿಂತ ಎತ್ತರದಲ್ಲಿದೆ. ಮಳೆ ನೀರು ಕೆಳ ಸೇತುವೆಯಲ್ಲಿ ತುಂಬಿಕೊಂಡು ಹಳ್ಳಿಗಳ ಸಂಪರ್ಕ ತಪ್ಪುವ ಅಪಾಯವಿದೆ’ ಎಂದು ಗ್ರಾಮಸ್ಥರು ದೂರಿದ ಬಳಿಕ, ರಸ್ತೆಯ ಮಣ್ಣು ತೆಗೆದು ಎತ್ತರ ತಗ್ಗಿಸುವ ಪ್ರಯತ್ನ ನಡೆದಿದೆ. ಚರಂಡಿ ಮಾತ್ರ ಮೇಲ್ಮಟ್ಟದಲ್ಲೇ ಇದೆ.

‘ಬೆಂಗಳೂರಿನಿಂದ ಮೈಸೂರಿನ ವರೆಗೂ ಚರಂಡಿಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಪೂರ್ವ ಮುಂಗಾರು ಸಮೀಪಿಸುತ್ತಿದ್ದು ಚರಂಡಿ ಅವ್ಯವಸ್ಥೆ ಆಗ ಗೊತ್ತಾಗುತ್ತದೆ. ಅಕ್ಟೋಬರ್‌ನಲ್ಲಿ ಮಳೆ ಸುರಿದಾಗಲೇ ಹೆದ್ದಾರಿ ಸಂಪೂರ್ಣ ಜಲಾವೃತವಾಗಿತ್ತು. ಈಗ ಹೆದ್ದಾರಿಗೆ ತೊಂದರೆಯಾಗದು. ಆದರೆ, ಮಳೆಗಾಲದಲ್ಲಿ ಸರ್ವೀಸ್‌ ರಸ್ತೆ ಜಲಾವೃತಗೊಳ್ಳುತ್ತದೆ’ ಎಂದು ಗ್ರಾಮಸ್ಥ ರಮೇಶ್‌ ಆತಂಕ ವ್ಯಕ್ತಪಡಿಸಿದರು.

ಹೆದ್ದಾರಿಯುದ್ದಕ್ಕೂ ಚರಂಡಿ ಕಾಮಗಾರಿ ಅಪೂರ್ಣವಾಗಿದ್ದು ಆರಂಭ, ಅಂತ್ಯವೇ ಇಲ್ಲ. ಕೆಲ ಚರಂಡಿ ಗಳನ್ನು ನಾಲೆಗೆ ಸಂಪರ್ಕಿಸಿರುವುದೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.